ಬೆಂಗಳೂರು: ಗಣೇಶ ಚತುರ್ತಿ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಪ್ರಕೃತಿಗೆ ಯಾವುದೇ ರೀತಿಯ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲು ಮುಂದಾಗಿರುವ ಬಿಬಿಎಂಪಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳ ವಿರುದ್ಧ ಸಮರ ಸಾರಲು ಮುಂದಾಗಿದೆ.
ಪರಿಸರ ಮಾಲಿನ್ಯ ಮಂಡಳಿಯೊಂದಿಗೆ ಕೈಜೋಡಿಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮೇಯರ್ ಮಂಜುನಾಥ್ ಪ್ರಸಾದ್ ಅವರು, ಗಣೇಶ ಮೂರ್ತಿಗಳ ಕುರಿತಂತೆ ಶಾಲೆ ಹಾಗೂ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗಣೇಶ ಮೂರ್ತಿ ವಿಸರ್ಜನೆಗಾಗಿ 150 ಮೊಬೈಲ್ ಟ್ಯಾಂಕ್ ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಲಾದ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಳ್ಳಲು ಎಲ್ಲಾ ಸ್ಥಳೀಯ ಅಧಿಕಾರಿಗಳು ನಮಗೆ ಸಹಾಯ ಮಾಡಲಿದ್ದಾರೆ. ಇಂತರ ವಿಗ್ರಹಗಳನ್ನು ತಯಾರು ಮಾಡಿರುವ ಘಟಕಗಳಿಗೆ ತದಂಡವನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಈ ಬಗ್ಗೆ ಸೂಚನೆಗಳನ್ನು ನೀಡಲಾಗಿದ್ದು, ಮೊಬೈಲ್ ಟ್ಯಾಂಕ್ ಗಳಲ್ಲಿಯೇ ಗಣೇಶ ಮೂರ್ತಿ ವಿಸರ್ಜನೆ ಮಾಡುವಂತೆ ತಿಳಿಸಲಾಗಿದೆ. ಪ್ರತೀ ವಾರ್ಡ್ ನಲ್ಲಿಯೂ ನಾಲ್ಕು ಮೊಬೈಲ್ ಟ್ಯಾಂಕ್ ಗಳನ್ನು ಇರಿಸಲಾಗುತ್ತದೆ. ಗಣೇಶ ಮೂರ್ತಿ ವಿಸರ್ಜನೆ ವೇಳೆ ಪೊಲೀಸರು ಭದ್ರತೆ ನೀಡಲಿದ್ದಾರೆ. ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಕ್ರೇನ್ ಗಳನ್ನು ನೀಡಲಾಗುತ್ತದೆ. ಪ್ಲಾಸ್ಟರ್ ಪ್ಯಾರಿಸ್ ನಿಂದ ಪರಿಸರಕ್ಕೆ ಆಗುವ ಹಾನಿ ಕುರಿತಂತೆ ಶೀಘ್ರದಲ್ಲಿಯೇ ಘೋಷಣೆಗಳನ್ನು ಮಾಡಲಾಗುತ್ತದೆ ಎಂದಿದ್ದಾರೆ.