ಬೆಂಗಳೂರು: ರಾಜ್ಯಾದ್ಯಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಕೊಡಗು ರಾಮಣ್ಣ ರೈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಶೀಘ್ರವೇ ರಾಜಕಾರಣಿಗಳಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಲಾಗುವುದು.
ಸಾರ್ವಜನಿಕರ ಸಲಹೆ, ಹಾಗೂ ಆಪ್ತರೊಬ್ಬರ ಸಲಹೆಯಂತೆ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಸೇರಿದಂತೆ ಎಲ್ಲಾ ಮಂತ್ರಿಗಳಿಗೂ ವಿಶೇಷ ಪ್ರದರ್ಶನ ಆಯೋಜಿಸಲಾಗುತ್ತಿದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
ಕನ್ನಡ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದ ಕುರಿತ ವಿಷಯವನ್ನು ಆಧರಿಸಿ ಈ ಸಿನಿಮಾ ಕಥೆ ಎಣೆಯಲಾಗಿದೆ.
ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದ ಬಗ್ಗೆ 2 ವರ್ಷಗಳ ಹಿಂದೆ, ಮಾಧ್ಯಮಗಳಲ್ಲಿ ಓದಿದ್ದೆ. ಆಗ ಈ ಸಂಬಂಧ ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದೆ, ನಮಗೆ ಇಂಗ್ಲೀಷ್ ಭಾಷೆಯೂ ಬೇಕು. ನಮಗೆ ಯೋಚನೆ ಮಾಡಲು, ಕನಸು ಕಾಣಲು ಭಾವನೆ ವ್ಯಕ್ತ ಪಡಿಸಲು ಮಾತೃಭಾಷೆ ಬೇಕು, ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಪ್ರಾಮುಖ್ಯತೆ ಬಗ್ಗೆ ನಮ್ಮ ಸಿನಿಮಾದಲ್ಲಿ ಹೇಳಲಾಗಿದೆ. ಅವುಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಬಗ್ಗೆ ತೋರಿಸಲಾಗಿದೆ. ಮುಖ್ಯಮಂತ್ರಿಗಳ ಬಿಡುವಿನ ಸಮಯ ಹೊಂದಿಸಿಕೊಂಡು ಸಿನಿಮಾ ಪ್ರದರ್ಶನ ಆಯೋಜಿಸಲಾಗುವುದು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.