ಕನಕಪುರ: ಮಗನು ಗೃಹಿಣಿಯೊಬ್ಬಳೊಡನೆ ಮನೆ ಬಿಟ್ಟು ಓಡಿ ಹೋದ ಕಾರಣ ಬೇಸರಗೊಂಡ ತಂದೆ-ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕನಕಪುರದಲ್ಲಿ ನಡೆದಿದೆ.
ಕನಕಪುರದ ಕಲ್ಲಿಗೌಡನದೊಡ್ಡಿ ಗ್ರಾಮದ ನಿವಾಸಿಗಳಾದ ಸಿದ್ದರಾಜು(52), ಸಾಕಮ್ಮ(42) ದಂಪತಿ.ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಂಪತಿಯ ಪುತ್ರನಾದ ಮನು ಎಂಬಾತ ಇದೇ ಗ್ರಾಮದ ಪಲ್ಲವಿ ಎಂಬ ಗೃಹಿಣಿಯನ್ನು ಪ್ರೀತಿಸಿದ್ದಲ್ಲದೆ ಆಕೆಯನ್ನು ಕರೆದುಕೊಂಡು ಓಡಿ ಹೋಗಿದ್ದಾನೆ. ಇದರಿಂದ ಉದ್ರಿಕ್ತರಾದ ಗೃಹಿಣಿಯ ಕುಟುಂಬಸ್ಥರು ಸಿದ್ದರಾಜು ಮನೆ ಮುಂದೆ ಬಂದು ರಾತ್ರಿ ವೇಳೆ ಗಲಾಟೆ ಮಾಡಿದ್ದಾರೆ. ಇಬ್ಬರನ್ನು ಅವಾಚ್ಯ ಶಬ್ದಗಳಿಂಡ ಬೈದಿದ್ದಾರೆ. ಇದರಿಂದ ಬೇಸರಗೊಂಡ ದಂಪತಿಗಳು ವಿಷ ಕುಡಿದು ಸಾವಿಗೆ ಶರಣಾಗಿದ್ದಾರೆ.
ಟ್ರಾಕ್ಟರ್ ಚಾಲಕನಾಗಿದ್ದ ಮನು ಕಳೆದ ನಾಲ್ಕು ವರ್ಷಗಳಿಂದ ಪಲ್ಲವಿಯನ್ನು ಪ್ರೀತಿಸುತ್ತಿದ್ದ. ಆದರೆ ಜಾತಿ ಬೇರೆಯಾಗಿದ್ದ ಕಾರಣ ಪಲ್ಲವಿ ಮನೆಯವರು ಒಪ್ಪಿರಲಿಲ್ಲ. ಅಲ್ಲದೆ ಕಳೆದ ಎರಡು ವರ್ಷಗಳ ಹಿಂದೆ ಪಲ್ಲವಿಗೆ ಬೇರೆಯವನೊಡನೆ ವಿವಾಹವಾಗಿದ್ದು ಎರಡು ವರ್ಷದ ಮಗಳೂ ಇದ್ದಳು.
ಇಷ್ಟಾದರೂ ಮನು ಹಾಗೂ ಪಲ್ಲವಿ ನಡುವೆ ಪ್ರೀತಿ ಮುಂದುವರಿದಿತ್ತು. ಇಬ್ಬರ ಮನೆಯವರು ಎಷ್ಟೇ ಹೇಳಿದರೂ ಆ ಜೋಡಿ ಸರಿಹೋಗಿರಲಿಲ್ಲ. ಮನೆಯವರ ಕಿರುಕುಳ ಹೆಚ್ಚಾಗಿದ್ದರಿಂದ ಇತ್ತೀಚೆಗೆ ಇಬ್ಬರೂ ಮನೆ ಬಿಟ್ಟು ಪರಾರಿಯಾಗಿದ್ದರು.
ಘಟನಾ ಸ್ಥಳಕ್ಕೆ ಕೋಡಿ ಹಳ್ಳಿ ಪೋಲೀಸರು ಆಗಮಿಸಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.