ರಾಜ್ಯ

ದುಂದುವೆಚ್ಚ ಆರೋಪ: ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅಮಾನತು

Lingaraj Badiger
ಬೆಂಗಳೂರು: 2016-17ನೇ ಸಾಲಿನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ದುಂದು ವೆಚ್ಚ ಮಾಡಿದ ಆರೋಪದ ಮೇಲೆ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಶನಿವಾರ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಅಧಿವೇಶನದ ವೆಚ್ಚದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹೆಚ್ಚುವರಿ ನಿರ್ದೇಶಕ ಎನ್.ಬಿ.ಶಿವರುದ್ರಪ್ಪ ನೇತೃತ್ವದಲ್ಲಿ ಐವರು ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು.
ಲೆಕ್ಕಪರಿಶೋಧನೆ ತಂಡ ಸಲ್ಲಿಸಿರುವ 40 ಪುಟಗಳ ವರದಿ ಆಧರಿಸಿ ಈ ಕ್ರಮ ಜರುಗಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. 
ವರದಿಯಲ್ಲಿ ಕೆಲವೊಂದು ಸೇವೆಗಳಿಗೆ ಎರಡೆರಡು ಸಲ ಬಿಲ್ ಪಾವತಿ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
2016ನೇ ಸಾಲಿನ ಬೆಳಗಾವಿ ಅಧಿವೇಶನದಲ್ಲಿ ಒಟ್ಟು 20 ಕೋಟಿ ರುಪಾಯಿ ಹಾಗೂ 2017ನೇ ಸಾಲಿನಲ್ಲಿ 21.57 ಖರ್ಚು ಮಾಡಲಾಗಿದೆ. ಆದರೆ 8.60 ಲಕ್ಷ ರು. ಹಣವನ್ನು ಟೆಂಡರ್ ಕರೆಯದೇ ಖರ್ಚು ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ್ದ ತಂಡ ನೀಡಿದ ವರದಿ ಆಧಾರದ ಮೂರ್ತಿ ಅವರನ್ನು ಅಮಾನತುಗೊಳಿಸಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮೂರ್ತಿ ಅವರು, ಟೆಂಡರ್ ಇಲ್ಲದೇ ಖರೀದಿಸಿದ್ದೇನೆ ಎಂದು ಆರೋಪಿಸಿ ನನ್ನನ್ನು ಅಮಾನತು ಮಾಡಿರುವುದುರ ಹಿಂದೆ ಜಾತಿ ದ್ವೇಷದ ಕುತಂತ್ರವಿದೆ ಎಂದು ಆರೋಪಿಸಿದ್ದಾರೆ.
ಸಿಎಜಿ ವರದಿಯಲ್ಲಿ ನನ್ನ ಬಗ್ಗೆ ಯಾವುದೇ ಆರೋಪವಿಲ್ಲ. ನನಗೆ ಇನ್ನೂ ಹತ್ತು ವರ್ಷಗಳ ಸೇವಾವಧಿ ಇದೆ. ನನ್ನ ಕುರ್ಚಿಯಿಂದ ಇಳಿಸಲು ಈ ಸಂಚು ಹೂಡಲಾಗಿದೆ. ಇದನ್ನು ನಾನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ ಎಂದು ಮೂರ್ತಿ ತಿಳಿಸಿದ್ದಾರೆ.
SCROLL FOR NEXT