ಬೆಂಗಳೂರು: ಐವರು ರಾಜ್ಯ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದು 3 ಕೆಜಿ ಚಿನ್ನ, 35 ಕೆಜಿ ಬೆಳ್ಳಿ ಮತ್ತು ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಆದಾಯಕ್ಕೆ ಮೀರಿ ಆಸ್ತಿ ಹೊಂದಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿತ್ತು.
ಶುಕ್ರವಾರ ಸಂಜೆ ನಡೆದ ದಾಳಿಯ ವೇಳೆ ದಾವಣಗೆರೆ ಕೃಷಿ ಇಲಾಖೆಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಹಂಸವೇಣಿ ಅವರ ಮನೆಯಲ್ಲಿ 1.56 ಕೆ.ಜಿ ಚಿನ್ನ ಮತ್ತು 2.2 ಕೆ.ಜಿ. ಬೆಳ್ಳಿ ಪತ್ತೆಯಾಗಿದೆ.
ಸಹಕಾರಿ ಇಲಾಖೆ, ಬೆಂಗಳೂರಿನ ಹೆಚ್ಚುವರಿ ರಿಜಿಸ್ಟ್ರಾರ್, ಆರ್.ಶ್ರೀಧರ್, ಮನೆಯಲ್ಲಿ 22 ಕೆಜಿ ಬೆಳ್ಳಿ ಹಾಗೂ ಎರಡು ಮನೆಗಳು, ಮೂರು ಸೈಟ್ ಗಳು, ಒಂದು ವಾಣಿಜ್ಯ ಸಂಕೀರ್ಣ ಮತ್ತು ಒಂದು ಥಿಯೇಟರ್ ಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದೆ.
ಇದಲ್ಲದೆ ಬಿಬಿಎಂಪಿಯ ಟೌನ್ ಪ್ಲಾನಿಂಗ್ಸಹಾಯಕ ನಿರ್ದೇಶಕನಾಗಿರುವ ಬಸೇತಪ್ಪ ಎಂಬುವವರ ಮನೆಯಲ್ಲಿ 10 ಕೆಜಿ ಬೆಳ್ಳಿ ಮತ್ತು 250 ಗ್ರಾಂ ಚಿನ್ನ, ಪತ್ತೆಯಾಗಿದೆ. ಅಲ್ಲದೆ ಇವರು ಎರಡು ಲಾಕರ್ ಗಳನ್ನು ಹೊಂದಿದ್ದು ಈ ಲಾಕರ್ ಗಳಲ್ಲಿ ಏನಿದೆ ಎನ್ನುವುದುಇನ್ನಷ್ಟೇ ತಿಳಿಯಬೇಕಿದೆ. ಇನ್ನು ದಾಳಿಯ ವೇಳೆ ಮನೆಯಲ್ಲಿ , ಚಿನ್ನದ ಖರೀದಿ ಸಂಬಂಧ `37 ಲಕ್ಷ ಮೌಲ್ಯದ ಬಿಲ್ ಗಳು ಪತ್ತೆಯಾಗಿದ್ದವು.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಕಿರಿಯ ಎಂಜಿನಿಯರ್,ಕೆ. ಮಣಿ ಎಂಬುವವರ ಮನೆಯ ಮೇಲೆ ಎಸಿಬಿ ದಾಳಿ ನಡೆಸಿ ಎರಡು ಮನೆಗಳು, ಎರಡು ಸೈಟ್ ಗಳು, ಒಂದು ಎಕರೆ ಭೂಮಿ ಮತ್ತು ಒಂದು ಪೆಟ್ರೋಲ್ ಪಂಪ್ ಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಇದ್ದಾರೆ. ಅದೇ ರೀತಿ ಮಂಗಳೂರಿನ ಸರ್ಕಾರಿ ಶಿಕ್ಷಕರ ಕಾಲೇಜಿನಲ್ಲಿ ರೀಡರ್ ಆಗಿರುವ ಡಿ. ಮಂಜುಮಾಥ್ ಅವರ ಮನೆಯಲ್ಲಿ , 443 ಗ್ರಾಂ ಚಿನ್ನದ ಮತ್ತು 983 ಗ್ರಾಂ ಬೆಳ್ಳಿ ಹಾಗೂ ಇತರ ಆಸ್ತಿ ದಾಖಲೆಗಳು ಸಿಕ್ಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.