ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ರೌಡಿಸಂ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿದ್ದ ಯುವಕ ವಿದ್ವತ್ ಮೇಲೆಯೂ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.
ಫೆ.17ರಂದು ವಿದ್ವತ್ ತನ್ನ ಸ್ನೇಹಿತರೊಂದಿಗೆ ಊಟ ಮಾಡಲು ಯು.ಬಿ.ಸಿಟಿಗೆ ಬಂದಿದ್ದರು. ಈ ವೇಳೆ ವಿದ್ವತ್ ಹಾಗೂ ನಲಪಾಡ್ ನಡುವೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದ ನಡೆಯುತ್ತಿದ್ದ ಸಂದರ್ಭದಲ್ಲಿ ವಿದ್ವತ್ ಅವರು ನಾನು ಯಾರು ಗೊತ್ತಾ...? ನನ್ನ ಅಪ್ಪ ಯಾರು ಗೊತ್ತಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ವಿದ್ವತ್ ಹಾಗೂ ಸ್ನೇಹಿತರು ಏಕಾಏಕಿ ಅರುಣ್ ಬಾಬು ಎಂಬುವವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಉದ್ಯಮಿ ಲೋಕಿ ಅಲಿಯಾಸ್ ಲೋಕನಾಥನ್ ಅವರ ಪುತ್ರ ವಿದ್ವತ್, ಅತಿಯಾಗಿ ಕುಡಿದಿದ್ದರಿಂದಾಗಿ ಸ್ವತಃ ಬಿದ್ದು ಮುಖಕ್ಕೆ ಗಾಯವಾಗಿದೆ ಎಂದು ಅರುಣ್ ಬಾಬು ಅವರು ದೂರು ನೀಡಿದ್ದರು. ಆದರೆ, ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ಅವರನ್ನು ವೈದ್ಯಕೀಯ ತಪಾಸಣೆ ನಡೆಸಿದ್ದ ವೈದ್ಯರು ವಿದ್ವತ್ ಮದ್ಯ ಸೇವನೆ ಮಾಡಿದ್ದ ಎಂದು ಹೇಳಿದ್ದಾರೆ.
ಪ್ರಸ್ತತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಲಪಾಡ್ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದು, ಈತನ ವಿರುದ್ಧ ಪೊಲೀಸರು ಐಸಿಸಿ ಸೆಕ್ಷನ್ 307 (ಕೊಲೆ ಯತ್ನ)ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.