ತ್ಯಾಗಮೂರ್ತಿ ಬಾಹುಬಲಿ ಮಹಾಮಜ್ಜನಕ್ಕೆ ಸಂಭ್ರಮದ ತೆರೆ
ಶ್ರವಣಬೆಳಗೊಳ: ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಒಡೆಯ, ತ್ಯಾಗಮೂರ್ತಿ ಬಾಹುಬಲಿಗೆ ಕಳೆದ 9 ದಿನಗಳಿಂದ ನಡೆಯುತ್ತಿದ್ದ 88ನೇ ಮಹಾಮಸ್ತಕಾಭಿಷೇಕ ಭಾನುವಾರ ಇತಿಹಾಸದ ನೇಪಥ್ಯಕ್ಕೆ ಸರಿಯಿತು.
12 ವರ್ಷಗಳವರೆಗೆ ಈ ಮಹೋತ್ಸವವನ್ನು ನೆನಪು ಮಾತ್ರ. ಆಧರೂ ಮುಂದಿನ ಜೂನ್ ವರೆಗೂ ಪ್ರತಿ ಭಾನುವಾರ ಬಾಹುಬಲಿಗೆ 30 ನಿಮಿಷಗಳ ಕಿರು ಮಸ್ತಕಾಭಿಷೇಕ ನಡೆಯಲಿದ್ದು, ಇದರಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಬಹುದಾಗಿದೆ.
ನಿನ್ನೆ ಮಧ್ಯಾಹ್ನ 2.43ಕ್ಕೆ ಕೊನೆಯ ಮಸ್ತಕಾಭಿಷೇಕಕ್ಕೆ ತೆರೆ ಬೀಳುತ್ತಿದ್ದಂತೆಯೇ ಭಗವಾನ್ ಬಾಹುಬಲಿಗೆ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟಿತು. ಚಾರುಕೀರ್ತಿ ಭಟ್ಟಾರಕ ಶ್ರೀಗಳು ಕ್ಷಣಕಾಲ ಮೌನವಾಗಿ ಮೂರ್ತಿಗೆ ನಮಸ್ಕರಿಸಿದರು. ದರ್ಶನಕ್ಕೆ ಬಂದಿದ್ದ ಜನ ಸಾಗರೋಪಾದಿಯಲ್ಲಿ ತಮ್ಮ ತಮ್ಮ ಊರುಗಳಿಗೆ ಮರಳಿದರು.
ಸೋಮವಾರ ಮಹಾಮಸ್ತಕಾಭಿಷೇಕದ ಸಮಾರೋಪ ಸಮಾರಂಭ ನಡೆಯಲಿದ್ದು, ಮಸ್ತಕಾಭಿಷೇಕ ಸಹಕರಿಸಿದ ಅಧಿಕಾರಿಗಳಿಗೆ ಸನ್ಮಾಮ ಮಾಡಲಾಗುತ್ತದೆ. ಫೆ.17ರಂದು 108 ಕಳಸಗಳ ಅಭಿಷೇಕದೊಂದಿಗೆ ಆರಂಭವಾದ ಮಜ್ಜನೋತ್ಸವ, ಫೆ.18ರಿಂದ ಫೆ.25ರವರೆಗೆ 1008 ಕಳಸಗಳ ಅಭಿಷೇಕದೊಂದಿಗೆ ನೆರವೇರಿತು.
ಒಟ್ಟಾರೆ 9 ದಿನಗಳಲ್ಲಿ ಬಾಹುಬಲಿಗೆ 8172 ಕಳಸಗಳಿಂದ ಜಲಾಭಿಷೇಕ, ಪಂಚ ದ್ರವ್ಯಗಳ ಅಭಿಷೇಕ ನೆರವೇರಿತು. ಇದಕ್ಕೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ, ಯಾತ್ರಿಕರು, ಜೈನ ಭಕ್ತರು ಹಾಗೂ ಪ್ರವಾಸಿಗರು ಸೇರಿ ದೇಶ ಹಾಗೂ ವಿದೇಶಗಳ 65 ಲಕ್ಷಕ್ಕೂ ಹೆಚ್ಚು ಜನ ಸಾಕ್ಷಿಯಾದರು.
ಈ ಬಾರಿ ಮೈಸೂರು ರಾಜವಂಶಸ್ಥ ಯದುವೀರ್, ಮಾಜಿ ಪ್ರಧಾನಮಂತ್ರಿ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಟ್ಟ ಏರಿ ಬಾಹುಬಲಿಗೆ ಅಭಿಷೇಕ ಮಾಡಿದ್ದು ವಿಶೇಷವಾಗಿತ್ತು. ಕುಡಿಯುವ ನೀರು, ಶೌಚಾಲಯ, ವಿದ್ಯುತ್, ವಸತಿ, ರಸ್ತೆ, ರೈಲು, ಬೆಟ್ಟ ಏರುವವರಿಗೆ ಡೋಲಿ, ಪೊಲೀಸ್ ಬಿಗಿ ಬಂದೋಬಸ್ತ್ ಸೇರಿ ಅಚ್ಚುಕಟ್ಟು ವ್ಯವಸ್ಥೆಗಳನ್ನು ಮಾಡಿಲಾಗಿತ್ತು. ಒಟ್ಟಾರೆಯಾಗಿ ಈ ಬಾರಿಯ ಬಾಹಬಲಿ ಮಹಾಮಜ್ಜನ ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು.
ಚಾರುಕೀರ್ತಿ ಭಟ್ಟಾರಕ ಶ್ರೀಗಳು ಮಾತನಾಡಿ, 2018 ಜೂನ್ ವರೆಗೂ ಪ್ರತಿ ಭಾನುವಾರ ಬಾಹುಬಲಿಗೆ ಕಿರು ಮಸ್ತಕಾಭಿಷೇಕ ನಡೆಯಲಿದ್ದು, ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳಬಹುದು. ಮಹಾಮಜ್ಜನಕ್ಕೆ ದೇಶ ಹಾಗೂ ವಿದೇಶಗಳಿಂದ ಸಾಕಷ್ಟು ಜನರು ಬಂದಿದ್ದರು. ಸಾರ್ವಜನಿಕರಿಗೆ ನೀಡಲಾದ ವ್ಯವಸ್ಥೆ ಕುರಿತು ಸರ್ಕಾರ ಹಾಗೂ ಮಠವನ್ನು ಪ್ರಶಂಸಿಸಲೇಬೇಕು. ಮಹಾಮಜ್ಜನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಅಧಿಕಾರಿಗಳು ಆಗಮಿಸಿದ್ದು, ಮಹಾಮಜ್ಜನ ಯಶಸ್ವಿಯಾಗುವಂತೆ ಮಾಡಿದ್ದಾರೆಂದು ಹೇಲಿದ್ದಾರೆ.
ಶ್ರವಣಬೆಳಗೊಳ ಶಾಂತಿಯ ಕೇಂದ್ರ: ರಾಜನಾಥ್ ಸಿಂಗ್
ಜೈನರ ಯಾತ್ರ ಕೇಂದ್ರ ಶ್ರವಣಬೆಳಗೊಳ ವಿಶ್ವದಾದ್ಯಂತ ಶಾಂತಿ, ಅಹಿಂಸೆ ಹಾಗೂ ತಾಳ್ಮೆಯ ಸಂದೇಶ ಸಾರುತ್ತಿದೆ. ಸಮಾಜ ಕಲ್ಯಾಣಕ್ಕಾಗಿ ಜೈನ ಧರ್ಮದ ತತ್ವಗಳು ಮತ್ತು ಮೌಲ್ಯಗಳನ್ನು ಅನುಸರಿಸುವುದು ಅಗತ್ಯವಿದೆ. ಜೈನ ಧರ್ಮ ವೈಜ್ಞಾನಿಕ ಧರ್ಮವೆಂದು ಹೇಳಲಾಗುತ್ತಿದ್ದು, ಇದಕ್ಕೆ ಸಾಕಷ್ಟು ಸಾಹಿತ್ಯ ಮತ್ತು ಪ್ರಮುಖ ದಾಖಲೆಗಳಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos