ಮುದ್ದೇಬಿಹಾಳ: ಕನ್ನಡದ ಪ್ರಖ್ಯಾತ ನಟ ಕಿಚ್ಚ ಸುದೀಪ್ ವಿಜಯಪುರ ಜಿಲ್ಲೆ ಮುದ್ದೇಬಿಹಾಳದಾಲ್ಲಿ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದರೆ ಅಶ್ಚರ್ಯವೇ?
ಮುದ್ದೇಬಿಹಾಳ ತಾಲೂಕಿನ ನಾಲತವಾಡ ಉಪ ತಹಶೀಲ್ದಾರ್ ಕಛೇರಿಯಲ್ಲಿ ಸುದೀಪ್ ಭಾವಚಿತ್ರವಿರುವ ಜಾತಿ ಪ್ರಮಾಣ ಪತ್ರಕ್ಕಾಗಿನ ಅರ್ಜಿ ಬಂದಿದ್ದು ಅದನ್ನು ಕಂಡ ಅಧಿಕಾರಿಗಳು ಕ್ಷಣ ಕಾಲ ಕಕ್ಕಾಬಿಕ್ಕಿಯಾಗಿದ್ದರು.
ಘಟನೆ ವಿವರ: ಅಸಲಿಗೆ ಇಲ್ಲಿ ನಟ ಸುದೀಪ್ ಚಿತ್ರ ಹಾಕಿ ವ್ಯಕ್ತಿಯೊಬ್ಬರು ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಾಲತವಾಡ ಹೋಬಳಿಯ ವಿರೇಶನಗರ ನಿವಾಸಿ ಸಿದ್ದಲಿಂಗಪ್ಪ ಕೋಳೂರ ಎನ್ನುವವರು ಈ ಅರ್ಜಿ ಸಲ್ಲಿಸಿದ್ದು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಜಾತಿ ಪ್ರಮಾಣಪತ್ರಕ್ಕಾಗಿ ಈ ಅರ್ಜಿ ಸಲ್ಲಿಕೆಯಾಗಿದೆ.
ಅರ್ಜಿ ಸಲ್ಲಿಸಿದ ನಂತರ ಅರ್ಜಿದಾರ ಫೊಟೋ ಹಾಕುವುದು ಕಡ್ಡಾಯವಾಗಿದೆ. ನಾಗಬೇನಾಳದಲ್ಲಿ ಹೊಸದಾಗಿ ಸಾಮಾನ್ಯ ಸೇವಾಕೇಂದ್ರ ಪ್ರಾರಂಭಿಸಿದ್ದ ಸಿದ್ದಲಿಂಗಪ್ಪ ಕೋಳೂರ ತಾವೇ ಅರ್ಜಿ ಸಿದ್ಧ ಪಡಿಸಿ ಅದಕ್ಕೆ ಬೇಕಾದ ನಮೂನೆಯಲ್ಲಿ ಜಾತಿ ಪ್ರಮಾಣ ಪತ್ರವನ್ನ ತಯಾರಿಸಿದ್ದಾರೆ. ಆ ನಂತರ ತಾವು ತಮ್ಮ ಚಿತ್ರದ ಬದಲು ಪ್ರಾಯೋಗಿಕವಾಗಿ ಸುದೀಪ್ ಚಿತ್ರ ಹಾಕಿದ್ದಾರೆ. ಮತ್ತು ಅದೇ ಮಾದರಿಯಲ್ಲಿ ನಾಡಕಚೇರಿಗೆ ಆನ್ಲೈನ್ನಲ್ಲಿ ಕಳಿಸಲಾಗಿದೆ.
ತಹಶೀಲ್ದಾರರ ಕಛೇರಿಯಲ್ಲಿ ಅರ್ಜಿಗಳನ್ನು ಡೌನ್ಲೋಡ್ ಮಾಡಿ ನೋಡಿದಾಗ ಸುದೀಪ್ ಫೋಟೋ ಕಂಡು ಬಂದಿದೆ. ಇದನ್ನು ಕಂಡ ಉಪ ತಹಶೀಲ್ದಾರ್ ಸುದೀಪ್ ಫೋಟೋ ಹೇಗೆ ಬಂತು ಎಂದು ತನಿಖೆ ನಡೆಸುವಂತೆ ಬಸವರಾಜ ಭದ್ರಣ್ಣ ಅವರಿಗೆ ಹೇಳಿದ್ಡಾರೆ. ಹಾಗೆ ತನಿಖೆ ನಡೆದಾಗ ಭಾವಚಿತ್ರ ಬದಲಾದ ಪ್ರಸಂಗ ಬೆಳಕಿಗೆ ಬಂದಿದೆ.