ರಾಜ್ಯ

3 ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ: ಮಗುವನ್ನು ರಕ್ಷಿಸಿದ ಧೈರ್ಯವಂತ ಬಾಲಕ

Manjula VN
ತುಮಕೂರು: 3 ವರ್ಷದ ಬಾಲಕನೊಬ್ಬನ ಮೇಲೆ ಮುಗಿಬಿದ್ದು ದಾಳಿ ನಡೆಸಿದ್ದ ರಾಕ್ಷಸ ನಾಯಿಗಳ ವಿರುದ್ಧ 7 ತರಗತಿ ಬಾಲಕನೊಬ್ಬ ಹೋರಾಟ ಮಾಡಿ ಬಾಲಕನನ್ನು ರಕ್ಷಣೆ ಮಾಡಿರುವ ಘಟನೆಯೊಂದು ಗುಬ್ಬಿ ತಾಲೂಕಿನ ಚೆಲೂರು ಹೋಬ್ಳಿಯಲ್ಲಿ ನಡೆದಿದೆ. 
ಡಿ.18 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಎಸ್.ಎಂ. ಅಭಿಷೇಕ್ (12) ಮಗುವನ್ನು ರಕ್ಷಣೆ ಮಾಡಿದ ಸಾಹಸಿ ಬಾಲಕನಾಗಿದ್ದಾನೆ. 
ಶಾಲೆಯಿಂದ ಮನೆಗೆ ಬಂದ ಚಿಕ್ಕಣ್ಣಸ್ವಾಮಿ ಎಂಬ ಮೂರು ವರ್ಷದ ಬಾಲಕನೊಬ್ಬನ ಮೇಲೆ ಬೀದಿ ನಾಯಿಗಳು ಒಮ್ಮೆಲೆ ಮುಗಿಬಿದ್ದಿದ್ದವು. ಬಾಲಕನ ಕುತ್ತಿಗೆಯನ್ನು ನಾಯಿಗಳು ಕಚ್ಚಿ ಹಿಡಿದಿದ್ದರು. ಸ್ಥಳೀಯರು ಮಾತ್ರ ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು. ಇದನ್ನು ಕಂಡ ಅಭಿಷೇಕ್ ಕೂಡಲೇ ಬಾಲಕನ ರಕ್ಷಣೆಗೆ ಧಾವಿಸಿದ್ದಾನೆ. ನಾಯಿಗಳನ್ನು ಹೊಡೆದು ದೂರ ತಳ್ಳಿ ಮಗುವನ್ನು ತನ್ನತ್ತ ಎಳೆದುಕೊಂಡಿದ್ದಾನೆ. 
ನಾಯಿಗಳ ದಾಳಿಯಿಂದಾಗಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಬಾಲಕನಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ನಡೆಸಲಾಗಿದೆ. ನಾಯಿಗಳ ದಾಳಿಗೊಳಗಾದ ತಂದೆ ಕುಮಾರ್ ಹಾಗೂ ತಾಯಿ ಮಂಜಪ್ಪ ಅವರು ಕೃಷಿ ಭೂಮಿಯನ್ನು ಹೊಂದಿದ್ದು, ಬಾಲಕನನ್ನು ಮನೆಯಲ್ಲಿ ಬಿಟ್ಟು ವ್ಯವಸಾಯ ಮಾಡಲು ಹೋಗುತ್ತಾರೆ. ಬಾಲಕ ಮನೆಯಿಂದ ಹೊರಗೆ ಬಂದಾಗ ನಾಯಿಗಳು ದಾಳಿ ನಡೆಸಿವೆ. 
ಅಭಿಷೇಕ್ ಸಾಹಸವನ್ನು ಕೇವಲ ಬಾಲಕನ ಪೋಷಕರಷ್ಟೇ ಅಲ್ಲದೆ, ಇಡೀ ಗ್ರಾಮವೇ ಪ್ರಶಂಶಿಸುತ್ತಿದೆ. ಬಾಲಕನ ಸಾಹಸ ಕುರಿತಂತೆ ಬಾಲಕನ ಶಾಲೆಯ ಮುಖ್ಯಸ್ಥರು ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ಬಾರಿಯ ಶೌರ್ಯ ಪ್ರಶಸ್ತಿಗೆ ಈತನ ಹೆಸರನ್ನು ಶಿಫಾರಸ್ಸು ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. 
SCROLL FOR NEXT