ರಾಜ್ಯ

ಚಿಕ್ಕಮಗಳೂರು: ನೈತಿಕ ಪೊಲೀಸ್ ಗಿರಿ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ; ಎಚ್ಚರಿಕೆ ಸಂದೇಶ ವೈರಲ್

Srinivasamurthy VN
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಮಿತಿ ಮೀರಿದ್ದು, ಅನ್ಯಕೋಮಿನ ಯುವಕರೊಂದಿಗೆ ಸ್ನೇಹ ಮಾಡದಂತೆ ಎಚ್ಚರಿಕೆ ನೀಡಿರುವ ವಾಟ್ಸಪ್ ಸಂದೇಶವೊಂದು ಇದೀಗ ವೈರಲ್ ಆಗುತ್ತಿದೆ.
ಚಿಕ್ಕಮಗಳೂರಿನ ಮೂಡಿಗೆರೆ ನಿವಾಸಿಗಳಿಗೆ ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದು, ಅನ್ಯಕೋಮಿನ ಯುವಕರೊಂದಿಗೆ ಸಲಿಗೆಯಿಂದಿದ್ದರೆ ಧರ್ಮದೇಟು ಎಂದು ಎಚ್ಚರಿಕೆ ನೀಡಿದೆ. ಈ ಬಗ್ಗೆ ವಾಟ್ಸಪ್ ನಲ್ಲಿ  ಸಂದೇಶವೊಂದು ಹಂಚಿಕೆಯಾಗುತ್ತಿದ್ದು, ಮೂಡಿಗೆರೆ ನಗರದ ಆಸುಪಾಸಿನ ಎಲ್ಲ ಹುಡುಗಿಯರಿಗೆ ಕೊನೆಯ ಎಚ್ಚರಿಕೆ ನೀಡುತ್ತಿದ್ದೇವೆ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
'ಕಾಲೇಜನಲ್ಲಿ ತನ್ನ ಸಹಪಾಠಿ, ನೆರೆಮನೆಯಾತ, ಪರಿಚಯಸ್ಥ ಎಂಬ ಸಲುಗೆಯಿಂದ ಅನ್ಯಧರ್ಮದ ಯುವಕರೊಂದಿಗೆ ಚಕ್ಕಂದವಾಡುತ್ತಿರುವುದು ಎಲ್ಲೇ ಕಂಡರು ಅಲ್ಲಿ ನಿಮ್ಮ ಮಾತಿಗೆ ಅವಕಾಶ ಕೊಡದೇ ಧರ್ಮದೇಟು ಗ್ಯಾರಂಟಿ.  ಕಾರಣ ನೂರು ಇರಬಹುದು ಅದರ ಅವಶ್ಯಕತೆ ಇಲ್ಲ. ನಮಗೆ ಹಿಂದೂ ಧರ್ಮ ಮುಖ್ಯ, ಧರ್ಮವನ್ನು ರಕ್ಷಣೆ ಮಾಡುವ ನಮ್ಮೆಲ್ಲರ ಕರ್ತವ್ಯ. #ಧರ್ಮೊರಕ್ಷತಿರಕ್ಷಿತಃ #ಮೂಡಿಗೆರೆಬಜರಂಗದಳ ’ ಎಂದು ಸಂದೇಶದಲ್ಲಿ ಬರೆಯಲಾಗಿದೆ. 
ಚಿಕ್ಕಮಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಕಿರುಕುಳ, 20 ವರ್ಷದ ಮಹಿಳೆ ನೇಣಿಗೆ ಶರಣು
ಅತ್ತ ಮೂಡಿಗೆರೆಯಲ್ಲಿ ಎಚ್ಚರಿಕೆ ವಾಟ್ಸಪ್ ಸಂದೇಶ ವೈರಲ್ ಆಗಿರುವಂತೆಯೇ ಇತ್ತ ಚಿಕ್ಕ ಮಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಕಿರುಕುಳಕ್ಕೆ ಬೇಸತ್ತ 20 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನವರಿ 6ರಂದೇ  ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದು, ಡೆತ್ ನೋಟ್ ನಲ್ಲಿ ' ನಾನು ನನ್ನ ತಾಯಿ ಮತ್ತು ಅನ್ಯಕೋಮಿನ ಹುಡುಗನೊಂದಿಗೆ ಹೊರಗೆ ಹೋಗಿದ್ದಾಗ ಕೆಲ ಯುವಕರು ದಾಳಿ ಮಾಡಿ ಕಿರುಕುಳ ನೀಡಿದ್ದರು. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. 
ಅಲ್ಲದೆ ಡೆತ್ ನೋಟ್ ನಲ್ಲಿ ಐವರ ಹೆಸರುಗಳನ್ನು ಉಲ್ಲೇಖಿಸಿದ್ದು, ಇದೀಗ ಈ ಐದು ಮಂದಿ ಯುವಕರ ಪೈಕಿ ಓರ್ವನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ನಾಲ್ಕು ಮಂದಿಯ ಬಂಧನಕ್ಕಾಗಿ ಬಲೆ  ಬೀಸಿದ್ದಾರೆ. ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
SCROLL FOR NEXT