ರಾಜ್ಯ

ಸಿಇಟಿ ಪರೀಕ್ಷೆಗೆ ಫೆಬ್ರವರಿ 1ರಿಂದ ಪ್ರಾಯೋಗಿಕ ಅರ್ಜಿ ಸಲ್ಲಿಕೆಗೆ ಅವಕಾಶ

Sumana Upadhyaya
ಬೆಂಗಳೂರು: ವೃತ್ತಿಪರ ಪದವಿ ಕೋರ್ಸ್ ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ತಪ್ಪಿಲ್ಲದೆ ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಾಯೋಗಿಕ ಅರ್ಜಿ ಸಲ್ಲಿಕೆ ಮಾಡಲು ನಿರ್ಧರಿಸಿದೆ.
 ಇದೇ ಮೊದಲ ಬಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದು,ಇಲ್ಲಿ ಅಭ್ಯರ್ಥಿಗಳು ಪ್ರಾಯೋಗಿಕ ಮಾದರಿಯಲ್ಲಿ ಅರ್ಜಿಗಳನ್ನು ತುಂಬಿ ಸಲ್ಲಿಸಬಹುದು. ಇದರಿಂದ ಅಭ್ಯರ್ಥಿಗಳಿಗೆ ಅಂತಿಮವಾಗಿ ಅರ್ಜಿ ತುಂಬುವುದು ಹೇಗೆ ಎಂದು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.
ಕಳೆದ ವರ್ಷ ಸಿಇಟಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವಾಗ ಹಲವು ತಪ್ಪುಗಳು ಆಗಿರುವ ಹಿನ್ನೆಲೆಯಲ್ಲಿ ಈ ವರ್ಷ ಪ್ರಾಯೋಗಿಕ ಅರ್ಜಿ ಸಲ್ಲಿಕೆಯನ್ನು ಆರಂಭಿಸಲಾಗಿದೆ. ಮೀಸಲಾತಿ ಕೋರುವಾಗ ಅಭ್ಯರ್ಥಿಗಳು ಗೊಂದಲವಾಗಿ ನೊ ಆಯ್ಕೆಗೆ ಟಿಕ್ ಮಾಡುತ್ತಾರೆ. ಆದರೆ ಸೀಟು ಹಂಚಿಕೆ ಸಂದರ್ಭದಲ್ಲಿ ಅವರಿಗೆ ಮೀಸಲಾತಿ ಎಷ್ಟು ಮುಖ್ಯ ಎಂಬುದು ಅರಿವಿಗೆ ಬರುತ್ತದೆ. ಆ ಹಂತದಲ್ಲಿ ಬದಲಾವಣೆಗೆ ಅವಕಾಶವಿರುವುದಿಲ್ಲ ಎನ್ನುತ್ತಾರೆ ಕೆಇಎಯ ಆಡಳಿತಾಧಿಕಾರಿ ಗಂಗಾಧರಯ್ಯ.
ಅರ್ಜಿ ತುಂಬುವಾಗ ಆಗುವ ತಪ್ಪುಗಳನ್ನು ಗ್ರಾಮೀಣ ಭಾಗದ ಅಭ್ಯರ್ಥಿಗಳು ಎದುರಿಸುತ್ತಿದ್ದರು. ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಆನ್ ಲೈನ್ ಪ್ರಕ್ರಿಯೆಯನ್ನು ಆರಂಭಿಸಿದರೂ ಕೂಡ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂತುಷ್ಟರಾಗಿರಲಿಲ್ಲ. ಗ್ರಾಮೀಣ ಭಾಗದ ಅಭ್ಯರ್ಥಿಗಳು ಆನ್ ಲೈನ್ ಪ್ರಕ್ರಿಯೆಗೆ ಇನ್ನೂ ಒಗ್ಗಿಕೊಂಡಿಲ್ಲ. ಈ ಅಂಶವನ್ನು ಗಮದಲ್ಲಿಟ್ಟುಕೊಂಡು ಪ್ರಾಯೋಗಿಕ ಅರ್ಜಿ ತುಂಬುವ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಅರ್ಜಿಗಳನ್ನು ತುಂಬುವಾಗ ಅಭ್ಯರ್ಥಿಗಳು 371 ಜೆ, ಕೃಷಿಕರು ಮತ್ತು ಕೃಷಿ ಕಾರ್ಮಿಕರ ಕೋಟಾದ ಪ್ರಾಮುಖ್ಯತೆಯನ್ನು ತಿಳಿಯುವಲ್ಲಿ ವಿಫಲರಾಗುತ್ತಾರೆ ಎನ್ನುತ್ತಾರೆ ಗಂಗಾಧರಯ್ಯ. ಫೆಬ್ರವರಿ 1ರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಪ್ರಾಯೋಗಿಕ  ಅರ್ಜಿ ಸಿಗುತ್ತದೆ.
ಸೀಟು ಹಂಚಿಕೆಯಲ್ಲಿ ಹಗರಣ: ಕೆಲ ವರ್ಷಗಳ ಹಿಂದೆ ಸೀಟು ಹಂಚಿಕೆಯಲ್ಲಿ ಹಗರಣ ನಡೆದಿತ್ತು ಎಂದು ವರದಿಯಾಗಿತ್ತು. ಸೀಟು ಹಂಚಿಕೆ ಹಂತದಲ್ಲಿ, ಕೆಲವು ಅಭ್ಯರ್ಥಿಗಳು ಕೋಟಾವನ್ನು ಬದಲಾಯಿಸಿದ್ದರು. ಕೆಲವರು ಗ್ರಾಮೀಣ ಕೋಟಾ, ಎಸ್/ಎಸ್ ಟಿ ಮತ್ತು ಕನ್ನಡ ಮಾಧ್ಯಮ ಕೋಟಾದಡಿ ಸೀಟು ಬೇಕೆಂದು ಪ್ರತಿಪಾದಿಸಿದ್ದರು. ಆದರೆ ಅರ್ಜಿಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಯೆಂದು ನಮೂದಿಸಿದ್ದರು. 170ಕ್ಕೂ ಹೆಚ್ಚಿನ ಅಭ್ಯರ್ಥಿಗಳನ್ನು ಪರೀಕ್ಷೆ ನಡೆಸಲಾಗಿತ್ತು. ಈ ಹಗರಣದ ವಿಚಾರಣೆ ಇನ್ನೂ ಸಿಐಡಿಯಲ್ಲಿದೆ.
SCROLL FOR NEXT