ಬೆಂಗಳೂರು: ಪರಿಷ್ಕೃತ ದರ ನಿಗದಿಗೆ ಸರ್ಕಾರ ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ, ಸಮಯಾಧಾರಿತ ದರಗಳಿಗೆ ಕ್ಯಾಬ್ ಚಾಲಕರು ಇದೀಗ ಪಟ್ಟುಹಿಡಿದು ಕುಳಿತಿದ್ದಾರೆ.
ರಾಜ್ಯದಲ್ಲಿ ಕಾರುಬಾರು ನಡೆಸುತ್ತಿರುವ ಆ್ಯಪ್ ಆಧಾರಿತ ಓಲಾ ಹಾಗೂ ಉಬರ್ ಕಂಪನಿಗಳು ಪ್ರಯಾಣದರಗಳನ್ನು ಇತ್ತೀಚೆಗಷ್ಟೇ ಹೆಚ್ಚಳ ಮಾಡಿತ್ತು. ಈ ಬದಲಾವಣೆಗಳು ಇನ್ನು ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ ಎಂದು ಹೇಳುತ್ತಿರುವ ಬೆನ್ನಲ್ಲೇ ಸರ್ಕಾರ ಪರಿಷ್ಕೃತ ದರ ನಿಗದಿ ಮಾಡುವಂತೆ ಸೂಚನೆ ನೀಡಿತ್ತು. ಇದಕ್ಕೆ ಕ್ಯಾಬ್ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯಾವುದೇ ಆಗ್ರಹಗಳಿಗೂ ಸರ್ಕಾರ ಮಣಿಯದ ಹಿನ್ನಲೆಯಲ್ಲಿ ಬದಲಾವಣೆಗಳನ್ನು ತರಲು ಕಾಲಾವಕಾಶಗಳನ್ನು ಕೇಳಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿರುವ ಸಾರಿಗೆ ಆಯುಕ್ತ ಬಿ. ದಯಾನಂದ ಅವರು, ಪರಿಷ್ಕೃತ ದರ ನಗದಿ ಮಾಡುವಂತೆ ಈಗಾಗಲೇ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಹೊಸ ದರಗಳನ್ನು ನಿಗದಿ ಮಾಡುವುದು ಬಿಟ್ಟರೆ ಕಂಪನಿಗಳಿಗೆ ಬೇರಾವುದೇ ಆಯ್ಕೆಗಳಿಲ್ಲ. ಸರ್ಕಾರದ ಸೂಚನೆಯನ್ನು ಪಾಲನೆ ಮಾಡಲು ಸಾಧ್ಯವಿಲ್ಲ ಎಂಬ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ. ಸಾಕಷ್ಟು ಸುದೀರ್ಘ ಪ್ರಕ್ರಿಯೆಗಳ ಬಳಿಕ ಪರಿಷ್ಕೃತ ದರ ನಿಗದಿ ಮಾಡುವಂತೆ ತಿಳಿಸಲಾಗಿದೆ. ಬದಲಾವಣೆಗಳನ್ನು ಮಾಡಲು ಕಂಪನಿಗಳು ಕಾಲಾವಕಾಶವನ್ನು ಕೇಳಿದೆ. ಹೀಗಾಗಿ ಕಾಲಾವಕಾಶವನ್ನು ನೀಡಲಾಗಿದೆ. ಶೀಘ್ರದಲ್ಲಿಯೇ ಕಂಪನಿಗಳೊಂದಿಗೆ ಸಭೆಯನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಕ್ಯಾಬ್ ಚಾಲಕರು ಸಮಯಾಧಾರಿತ ದರಗಳನ್ನು ಕೂಡ ಸೇರ್ಪಡೆಗೊಳಿಸಿಕೊಂಡಿದ್ದು, ಪ್ರಸ್ತುತ ಸರ್ಕಾರ ಪರಿಷ್ಕೃತ ದರ ನಿಗದಿ ಮಾಡುವಂತೆ ಸೂಚಿಸಿರುವ ಹಿನ್ನಲೆಯಲ್ಲಿ ಇದರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. 20 ನಿಮಿಷ ಉಚಿತ ಕಾಯುವ ಸಮಯ ಕೂಡ ನೂತನ ದರದಲ್ಲಿ ನಿಗದಿಯಾಗಿದ್ದು ಇದಕ್ಕೆ ಚಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪ್ರಸ್ತುತ ಉಬರ್ 5 ನಿಮಿಷಗಳ ಬಳಿಕ ಪ್ರತೀ ನಿಮಿಷಕ್ಕೆ ರೂ.5.27 ಪಡೆದುಕೊಳ್ಳುತ್ತಿದ್ದು, ಓಲಾ ಕಾಯುವಿಕೆಗೆ ಯಾವುದೇ ರೀತಿಯ ಹಣವನ್ನು ಪಡೆಯುತ್ತಿಲ್ಲ. ಹೀಗಾಗಿ ಸರ್ಕಾರ ಈ ಎಲ್ಲಾ ವಿಚಾರಗಳನ್ನು ಪರಿಶೀಲನೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.
ಓಲಾ ವಕ್ತಾರ ಮಾತನಾಡಿ, ಪರಿಷ್ಕೃತ ದರಗಳನ್ನು ಕಂಪನಿ ಈ ಹಿಂದೆಯೇ ಅಳವಡಿಸಿಕೊಂಡಿತ್ತು. ಎಲ್ಲಾ ಗ್ರಾಹಕರಿಗೂ ಪರಿಷ್ಕೃತ ದರದಂತೆಯೇ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ಉಬರ್ ವಕ್ತಾರ ಮಾತನಾಡಿ, ಪರಿಷ್ಕೃತ ದರ ನಿಗದಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ, ಸಮಯಾಧಾರಿತ ದರಗಳ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos