ಮಹದಾಯಿ ವಿವಾದ: ಕಣಕುಂಬಿಗೆ ಧಿಡೀರ್ ಭೇಟಿ ನೀಡಿದ ಗೋವಾ ತಂಡ
ಬೆಳಗಾವಿ: ಮಹದಾಯಿ ವಿವಾದ ಇನ್ನೂ ಬಿಸಿಯಾಗಿರುವ ವೇಳೆಯಲ್ಲಿಯೇ ಗೋವಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡ ಜಿಲ್ಲಾಡಳಿತಕ್ಕೆ ಮಾಹಿತಿಯನ್ನೂ ನೀಡದೆ ಕಣಕುಂಬಿಯಲ್ಲಿರುವ ಮಹದಾಯಿ ಕೊಳ್ಳಕ್ಕೆ ಭೇಟಿ ಕೊಟ್ಟಿದೆ.
ಗೋವಾ ಸ್ಪೀಕರ್ ಪ್ರಮೋದ ಸಾವಂತ ನೇತೃತ್ವದ ತಂಡ ಮಹದಾಯಿ ಕೊಳ್ಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಗೋವಾ ಸ್ಪೀಕರ್ ಜತೆಗೆ ಡ್ಯೆಪುಟಿ ಸ್ಪೀಕರ್ ಮೈಕಲ್ ಲೋಬೋ , ಶಾಸಕರಾದ ಪ್ರಸಾದ್ ಗಾಂವ್ಕರ್, ರೆನಾಲ್ಡ್ ಲಾರೆನ್ಸ್ ಎನ್ಜಿಟಿಸಿ ಸಮಿತಿಯ ಸದಸ್ಯರು ಮತ್ತು ಅಧಿಕಾರಿಗಳು ಗೋವಾದ ಮಾಧ್ಯಮದವರು, ಅಲ್ಲಿಯ ಪೊಲೀಸ್ ಅಧಿಕಾರಿಗಳೂ ಆಗಮಿಸಿದ್ದರು.
ಅಧಿಕಾರಿಗಳ ತಂಡದ ಭೇಟಿ ಹಿನ್ನೆಲೆಯಲ್ಲಿ ಕಣಕುಂಬಿ ಬಳಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕೆಲದಿನಗಳ ಹಿಂದೆಯಷ್ಟೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ ಸಹ ವಿವಾದಿತ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.
ಒಂದು ರಾಜ್ಯದ ನೀರಾವರಿ ಪ್ರದೇಶಕ್ಕೆ ಬೇರೆ ರಾಜ್ಯದ ಸಚಿವರು, ಅಧಿಕಾರಿಗಳು ಭೇಟಿ ಕೊಡುವ ಮುನ್ನ ಜಿಲ್ಲಾಡಳಿತಕ್ಕೆ ಪೂರ್ವ ಸೂಚನೆ ಕಳಿಸಬೇಕು. ಇಂತಹಾ ನಿಯಮವನ್ನು ಗಾಳಿಗೆ ತೂರಿ ಕಣಕುಂಬಿಗೆ ಧಿಡೀರನೆ ಭೇಟಿ ನೀಡಿರುವ ಗೋವಾ ತಂಡದ ಕುರಿತಾಗಿ ಕನ್ನಡ ಹೋರಾಟಗಾರರು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗೆ ತಂಡವನ್ನು ಕಳಿಸಿ ಪರಿಶೀಲನೆ ಕಾರ್ಯ ಕೈಗೊಳ್ಳುವ ಮೂಲಕ ಗೋವಾ ತನ್ನ ಮೊಂಡತನವನ್ನು ತೋರಿಸುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರ ಯಾವ ರೀತಿಯಲ್ಲಿ ಪ್ರತಿಕ್ರಯಿಸಲಿದೆ ಎನ್ನುವುದನ್ನು ಕಾದು ನೋಡಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋ ಚಂದರಗಿ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos