ಬೆಂಗಳೂರು: ಮರಕ್ಕೆ ಸುತ್ತಿಹಾಕಿಕೊಂಡಿದ್ದ ಗಾಳಿಪಟದ ದಾರಕ್ಕೆ ಸಿಲುಕಿಹಾಕಿಕೊಂಡು ಒದ್ದಾಡುತ್ತಿದ್ದ ಹದ್ದನ್ನು ರಕ್ಷಿಸಲು ಹೋಗಿ ಮರದಿಂದ ಕೆಳಗೆ ಬಿದ್ದು ಯುವಕನೊಬ್ಬ ಗಾಯಗೊಂಡಿರುವ ಘಟನೆ ಲಾಲ್'ಬಾಗ್ ನಲ್ಲಿ ಭಾನುವಾರ ನಡೆದಿದೆ.
ವಿಶಾಲ್.ಜಿ ಗಾಯಗೊಂಡ ಯುವಕನಾಗಿದ್ದಾನೆ. ಬಿಹಾರ ಮೂಲದ ವಿಶಾಲ್ 6 ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ. ಎಸ್'ಜಿಎನ್ ಲೇಔಟ್ ನಲ್ಲಿ ಕೇಟರರ್ ಆಗಿ ಕೆಲಸ ಮಾಡುತ್ತಿರುವ ಸಹೋದರನೊಂದಿಗಿದ್ದ. ಪ್ರತೀನಿತ್ಯ ವಾಯು ವಿಹಾರಕ್ಕೆ ವಿಶಾಲ್ ಲಾಲ್ ಬಾಗ್'ಗೆ ಬರುತ್ತಿದ್ದರು. ಇದರಂತೆ ನಿನ್ನೆ ಕೂಡ ವಾಯುವಿಹಾರಕ್ಕೆ ಬಂದಿದ್ದಾರೆ. ಉದ್ಯಾನವನಕ್ಕೆ ಬರುತ್ತಿದ್ದಂತೆಯೇ ಮರವೊಂದರ ಬಳಿ ಜನಜಂಗುಳಿ ನಿಂತಿರುವುದನ್ನು ಗಮನಿಸಿದ ವಿಶಾಲ್ ಹತ್ತಿರಕ್ಕೆ ಹೋಗಿದ್ದಾರೆ. ಈ ವೇಳೆ ಗಾಳಿಪಟದ ದಾರಕ್ಕೆ ಸಿಲುಕಿಕೊಂಡು ಹದ್ದು ಪರದಾಡುವುದನ್ನು ನೋಡಿದ ಯುವಕ ಕೂಡಲೇ ಹದ್ದು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಹದ್ದು ಸಿಲುಕಿ ಹಾಕಿಕೊಂಡಿರುವ ಸುದ್ದಿಯನ್ನು ಸ್ಥಳೀಯರು ಉದ್ಯಾನವನದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬಳಿಕ ಅಧಿಕಾರಿಗಳು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಶಾಲ್ ಹದ್ದು ರಕ್ಷಣೆ ಮುಂದಾದಾದಾ ವಾಯು ವಿಹಾರ ನಡೆಸುತ್ತಿದ್ದ ಇತರೆ ಸಾರ್ವಜನಿಕರು ಬೇಡ ಎಂದು ಕಿರುಚಿದ್ದಾರೆ.ಆದರೂ, ಸಾಹಸ ಮನೋವೃತ್ತಿಯ ವಿಶಾಲ ಮರ ಹತ್ತುವುದನ್ನು ಮುಂದುವರೆಸಿದ್ದಾರೆ. ಬಳಿಕ 15 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಪರಿಣಾಮ ವಿಶಾಲ್ ಅವರ ತಲೆ ಮತ್ತು ಬೆನ್ನಿನ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿಗಳು ಹದ್ದು ರಕ್ಷಣೆ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos