ಬೆಂಗಳೂರು: ಕೈಲಾಸ ಮಾನಸ ಸರೋವರ ಯಾತ್ರೆಗೆ ರಾಜ್ಯದಿಂದ ಕರೆದುಕೊಂಡು ಹೋಗಿದ್ದ 230 ಜನರು ಸುರಕ್ಷಿತವಾಗಿದ್ದಾರೆಂದು ಶಂಕರ ಟ್ರಾವೆಲ್ಸ್ ಮಂಗಳವಾರ ಹೇಳಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಂಕರ ಟ್ರಾವೆಲ್ಸ್ ಮ್ಯಾನೇಜರ್ ಯಾಮಿನಿ ಯವರು, 230 ಜನರನ್ನು ನೇಪಾಳದ ಮೂಲಕ ಮಾನಸಸರೋವರ ಯಾತ್ರೆಗೆ ಕರೆದುಕೊಂಡು ಹೋಗಲಾಗಿತ್ತು. 230 ಮಂದಿ ಪೈಕಿ 70 ಮಂದಿ ಸಿಮಿಕೋಟ್ ನಲ್ಲಿ, 40 ಮಂದಿ ಹಿಲ್ಸಾದಲ್ಲಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ. ಭೂ ಮಾರ್ಗವಾಗಿ ತೆರಳಿದ್ದ 120 ಜನರು ಕಠ್ಮಂಡುವಿಗೆ ವಾಪಸ್ಸಾಗುತ್ತಿದ್ದಾರೆ. ಯಾವುದೇ ರೀತಿಯ ಆತಂಕಗಳು ಬೇಡ ಎಂದು ಹೇಳಿದ್ದಾರೆ.
ನೇಪಾಳದ ಸಿಮಿಕೋಟ್ ನಲ್ಲಿ ಕಳೆದ 4 ದಿನಗಳಿಂಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ರಾಜ್ಯ ಸುಮಾರು 200ಕ್ಕೂ ಹೆಚ್ಚು ಮಂದಿ ಯಾತ್ರಾರ್ಥಿಗಳು ಯಾವುದೇ ರೀತಿಯ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದರಿಂದ ಕುಟುಂಬಸ್ಥರು ಭೀತಿಗೊಳಗಾಗಿದ್ದರು.
ಪ್ರತಿಕೂಲ ಹವಾಮಾನದಿಂದಾಗಿ ಯಾತ್ರೆಗೆ ತೆರಳಲು ಸಾಧ್ಯವಾಗದೆ ಶಿಬಿರಗಳಲ್ಲಿಯೇ ಬೀಡುಬಿಟ್ಟಿದ್ದರು. ಸಂಕಷ್ಟದಲ್ಲಿ ಸಿಲುಕಿರುವ ಯಾತ್ರಾರ್ಥಿಗಳ ಪೈಕಿ ಮೈಸೂರು, ರಾಮನಗರ, ಚನ್ನಪಚ್ಚಣ ನಿವಾಸಿಗಳೇ ಹೆಚ್ಚಾಗಿದ್ದರು ಎಂದು ಹೇಳಲಾಗುತ್ತಿತ್ತು.
ಸಂಕಷ್ಟದಲ್ಲಿರುವ ಭಾರತೀಯರನ್ನು ನೇಪಾಳದ ಭಾರತೀಯ ರಾಯಭಾರಿ ಕಚೇರಿ ರಕ್ಷಣೆ ಮಾಡುತ್ತಿದ್ದು, ಯಾತ್ರಿಕರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ.