ಚಿಕ್ಕಮಗಳೂರು: ಮದುವೆಗೆ ಹೆಣ್ಣು ಸಿಕ್ಕಿಲ್ಲ ಎಂದು ಅರ್ಚಕ ವೃತ್ತಿಯನ್ನೇ ಬಿಟ್ಟ ಯುವಕ!
ಚಿಕ್ಕಮಗಳೂರು: ತಾನು ಅರ್ಚಕನಾಗಿದ್ದರೆ ತನಗಾರೂ ಹೆಣ್ಣು ಕೊಡುವುದಿಲ್ಲ, ಹೀಗಾಗಿ ನಾನು ಅರ್ಚಕ ಹುದ್ದೆ ತೊರೆಯುತ್ತಿದ್ದೇನೆ ಎಂದು ಚಿಕ್ಕಮಗಳೂರಿನ ಅರ್ಚಕರೊಬ್ಬರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಚಿಕ್ಕಮಗಳೂರಿನ ಗ್ರಾಮವೊಂದರ ದೇವಸ್ಥಾನದ ಅರ್ಚಕರಾಗಿರುವ ವ್ಯಕ್ತಿಯೊಬ್ಬರು ಮಾತನಾಡಿ ತನಗೀಗ 34 ವರ್ಷ.ನಾನು ಅರ್ಚಕನಾಗಿರುವ ಕಾರಣ ನನಗೆ ಯಾರೂ ಹೆಣ್ಣು ಕೊಡಲಿಲ್ಲ.ಇದೀಗ ನಾನು ಈ ಉದ್ಯೋಗವನ್ನೇ ತೊರೆಯಲು ತೀರ್ಮಾನಿಸಿದ್ದೇನೆ ಎಂದರು.
ಅರ್ಚಕ ಹುದ್ದೆ ತೊರೆಯುವುದಾಗಿ ಘೋಷಣೆ ಮಾಡಿದಾಗ ಗ್ರಾಮಸ್ಥರು ಇಂತಹಾ ನಿರ್ಧಾರಕ್ಕೆ ಕಾರಣ ಕೇಳಿದ್ದರು. ನಾನು ಅವರಿಗೆ ಇದೇ ಕಾರಣ ನೀಡಿದ್ದೇನೆ. ನನಗೆ ಉತ್ತಮ ಆದಾಯ, ಮನೆ, ಎಲ್ಲ ಇದ್ದರೂ ಯಾವುದೇ ಬ್ರಾಹ್ಮಣ ಕನ್ಯೆ ತನ್ನನ್ನು ಮದುವೆಯಾಗಲು ಮುಂದೆ ಬಂದಿಲ್ಲ. ಬ್ರಾಹ್ಮಣ ಪೋಷಕರು ತಮ್ಮ ಮಗಳನ್ನು ಅರ್ಚಕರಿಗೆ ಕೊಡಲು ಒಪ್ಪುತ್ತಿಲ್ಲ. ಬೇರೆ ಜಾತಿಯವರನ್ನು ಮದುವೆಯಾಗುವುದು ಸಹ ಸಾಧ್ಯವಿಲ್ಲ. ನಮ್ಮ ಅರ್ಚಕ ವೃತ್ತಿಯವರಲ್ಲಿ ಕಠಿಣ ಆಚರಣೆ, ಸಂಪ್ರದಾಯಗಳಿದ್ದು ಬೇರೆ ಜಾತಿಯ ಯುವತಿಯರನ್ನು ಮದುವೆಯಾಗಲು ಬರುವುದಿಲ್ಲ. ಹೀಗಾಗಿ ನನಗೆ ಮನಸ್ಸಿಲ್ಲದೆ ಹೋದರೂ ಅನಿವಾರ್ಯವಾಗಿ ಈ ಕೆಲಸ ಬಿಟ್ಟು ಬೇರೆ ವೃತ್ತಿ ಹಿಡಿಯುತ್ತೇನೆ.
ನಾನೀಗ ಬೇರೆ ಜಾತಿಯ ಹುಡುಗಿಯನ್ನೂ ವಿವಾಹವಾಗಬಹುದು, ಸಣ್ಣ ಪ್ರಮಾಣದ ಉದ್ಯಮ, ಸಾವಯವ ಕೃಷಿ ಮಾಡಿ ಜೀವನ ಸಾಗಿಸುತ್ತೇನೆ ಎಂದು ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಹೇಳಿದ್ದಾರೆ.
ಅರ್ಚಕರ ಈ ನಡೆ ಜಿಲ್ಲೆಯಾದ್ಯಂತ ಬ್ರಾಹ್ಮಣರು ಸೇರಿದಂತೆ ಸಮಾಜದ ನಾನಾ ವರ್ಗದ ಜನರಲ್ಲಿ ಚಿಂತನೆಗೆ ಕಾರಣವಾಗಿದೆ.
ಕರಾವಳಿ, ಮಲೆನಾಡು ಭಾಗದ ಬ್ರಾಹ್ಮಣ ಯುವಕರನ್ನು ವಿವಾಹವಾಗಲು ಬ್ರಾಹ್ಮಣ ಕನ್ಯೆಯರು ಒಪ್ಪಿಕೊಳ್ಳುವುದಿಲ್ಲ, ಇದರಲ್ಲಿಯೂ ಹಳ್ಳಿಗಳಲ್ಲಿದ್ದು ಪುರೋಹಿತ, ಅಡಿಗೆ ಕೆಲಸ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಕನ್ಯೆ ದೊರೆಯುವುದು ದುಸ್ಸಾಹಸ ಎನ್ನುವಂತಾಗಿದೆ. ಹಲವು ವರ್ಷಗಳಿಂದ ಈ ಸಮಸ್ಯೆ ತಲೆ ಎತ್ತಿದ್ದು ಬ್ರಾಹ್ಮ ಪರಿಷತ್ತು ಸೇರಿ ಅನೇಕ ಸಂಘಟನೆಗಳು ಇದಕ್ಕೆ ಪರ್ಯಾಯವನ್ನು ಹುಡುಕಲು ಮುಂದಾಗಿದೆಯಾದರೂ ಸಮಸ್ಯೆ ಇನ್ನೂ ಬೃಹದಾಕಾರವಾಗಿ ಬೆಳೆಯುತ್ತಿರುವುದು ವಿಪರ್ಯಾಸವೇ ಸರಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos