ಭೀಕರ ಅಪಘಾತ, ಕಟೀಲು ಅರ್ಚಕರ ಪುತ್ರ ಸೇರಿ ಇಬ್ಬರು ವಿದ್ಯಾರ್ಥಿಗಳ ಸಾವು
ಬೆಂಗಳೂರು: ಮಂಗಳವಾರ ತಡರಾತ್ರಿ ಕೆಎಸ್ಆರ್ಟಿಸಿ ಬಸ್, ಕ್ಯಾಂಟರ್ ನಡುವೆ ಕಾರೊಂದು ಸಿಲುಕಿದ್ದು ಕಾರಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಕಟೀಲು ದುರ್ಗಾಪರಮೇಶ್ವರಿ ದೇವಾಲಯಣ ಅನುವಂಶಿಕ ಅರ್ಚಕರಾದ ಹರಿನಾರಾಯಣ ಅಸ್ರಣ್ಣ ಅವರ ಪುತ್ರ ಶ್ರೀನಿಧಿ ಅಸ್ರಣ್ಣ(21) ಹಾಗೂ ತುಮಕೂರಿನ ಪ್ರಜ್ವಲ್ (20), ಎಂದು ಗುರುತಿಸಲಾಗಿದೆ.
ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಇವರು ತಮ್ಮ ಇನ್ನಿಬ್ಬರು ಸ್ನೇಹಿತರೊಡನೆ ಪ್ರಾಜಕ್ಟ್ ವಿಚಾರವಾಗಿ ಬೆಂಗಳೂರಿಗೆ ಆಗಮಿಸಿದ್ದರು.
ತುಮಕೂರು ರಸ್ತೆ ಟಿ.ಬೇಗೂರು ಸಮೀಪ ತಾಳೆಕೆರೆ ಕ್ರಾಸ್ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಕ್ಯಾಂಟರ್ ನಡುವೆ ಈ ವಿದ್ಯಾರ್ಥಿಗಳಿದ್ದ ಕಾರು ಸಿಕ್ಕಿಹಾಕಿಕೊಂಡಿದೆ. ಕಾರಿನಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿಗಳಾದ ಮೂಡಬಿದಿರೆಯ ಶರತ್ ಬಂಡಾರಿ ಮತ್ತು ಕಟೀಲಿನ ಶರತ್ ರಾಮ್ ದಾಸ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿದ್ಯಾರ್ಥಿಗಳು ಬೆಂಗಳೂರು ಕೆಂಗೇರಿಯ ಆರ್ಎನ್ಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಸ್ನೇಹಿತನನ್ನು ಮನೆಗೆ ಬಿಡಲೆಂದು ಕಾರಿನಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಮೊದಲು ಕ್ಯಾಂಟರ್ ಗೆ ಗುದ್ದಿ ಬಳಿಕ ಬಸ್ ಗೆ ಡಿಕ್ಕಿಯಾಗಿದೆ, ಈ ನಡುವೆ ಬಸ್ ಹಾಗೂ ಕ್ಯಾಂಟರ್ ಮುಖಾಮುಖಿಯಾಗಿದ್ದು ಕಾರು ಅವುಗಳ ನಡುವೆ ಸಿಕ್ಕು ನುಜ್ಜುಗುಜ್ಜಾಗಿದೆ..
ಅಪಘಾತಕ್ಕೀಡಾದ ಬಸ್ ನರಗುಂದ ಡಿಪೋಗೆ ಸೇರಿದ್ದು ಬೆಂಗಳೂರಿಗೆ ಆಗಮಿಸುತ್ತಿತ್ತು.
ನೆಲಮಂಗಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos