ರಾಜ್ಯ

ಶಿಮ್ಲಾದಲ್ಲಿ ಸಿಲುಕಿದ್ದ ಕರ್ನಾಟಕದ ಮಹಿಳೆಗೆ ವಾಪಸ್ಸಾಗಲು ರಾಜ್ಯ ಸರ್ಕಾರ ನೆರವು

Srinivas Rao BV
ಬೆಂಗಳೂರು: ಹಿಮಾಚಲ ಪ್ರದೇಶದ ಶಿಮ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಸೂರು ಮೂಲದ ಮಹಿಳೆ ತವರಿಗೆ ವಾಪಸ್ಸಾಗಲು ರಾಜ್ಯ ಸರ್ಕಾರ ನೆರವು ನೀಡಿದೆ.
ಮೈಸೂರು ಮೂಲದ ಮಹಿಳೆಯನ್ನು ವಾಪಸ್ ರಾಜ್ಯಕ್ಕೆ ಕರೆತರಲು ಸಿಎಂ ಕುಮಾರಸ್ವಾಮಿ ಮೈಸೂರಿನ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಪತಿಯಿಂದ ಪರಿತ್ಯಕ್ತಳಾಗಿದ್ದ ಮೈಸೂರಿನ ಮಹಿಳೆ ಮಾನಸಿಕ ಅಸ್ವಸ್ಥತೆಗೀಡಾಗಿದ್ದು, ಶಿಮ್ಲಾದ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವರದಿ ಪ್ರಕಟವಾಗಿತ್ತು.
ಈ ಬಗ್ಗೆ ಟಿವಿ 5 ಸುದ್ದಿ ವಾಹಿನಿಯ ದೆಹಲಿ ವಿಭಾಗದ ಮುಖ್ಯಸ್ಥರಾಗಿರುವ ಸ್ವಾತಿ ಚಂದ್ರಶೇಖರ್ ವಿಶೇಷ ವರದಿ ಪ್ರಕಟಿಸಿ ಮಹಿಳೆಯ ಪರಿಸ್ಥಿತಿಯನ್ನು ಶಿಮ್ಲಾ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳ ಗಮನಕ್ಕೆ ತಂದಿದ್ದರು.
ಈ ನಡುವೆ ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಪ್ರಕ್ರಿಯೆಗಳಲ್ಲಿ ಆಡಳಿತ ಯಂತ್ರ ನಿರತವಾಗಿತ್ತು. ಆದರೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ದೆಹಲಿಗೆ ಭೇಟಿ ನೀಡಿದ್ದಾಗ ಶಿಮ್ಲಾದಲ್ಲಿದ್ದ ಮಹಿಳೆಯ ಪರಿಸ್ಥಿತಿಯ ಕುರಿತು ವಿಶೇಷ ವರದಿ ಪ್ರಕಟಿಸಿದ್ದ ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದರು. ಈಗ  ಮೈಸೂರು ಮೂಲದ ಮಹಿಳೆ ತವರಿಗೆ ವಾಪಸ್ಸಾಗಲು ರಾಜ್ಯ ಸರ್ಕಾರ ನೆರವು ನೀಡಿದೆ. 
ರಾಜ್ಯದ ಅಧಿಕಾರಿಗಳು ಹಿಮಾಚಲ ಪ್ರದೇಶದ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮಹಿಳೆಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ, ಚಿಕಿತ್ಸೆಯ ನಂತರ ಆಕೆಗೆ ಆಶ್ರಯ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 
SCROLL FOR NEXT