ರಾಜ್ಯ

ನೈರುತ್ಯ ರೈಲ್ವೆಯಿಂದ ಕಳೆದ 350 ದಿನಗಳಲ್ಲಿ 1, 100 ಮಕ್ಕಳ ರಕ್ಷಣೆ

Nagaraja AB

ಬೆಂಗಳೂರು: ನೈರುತ್ಯ ರೈಲ್ವೆಯ  ಆರ್ ಪಿಎಫ್ ನಿಂದ ಕಳೆದ 350 ದಿನಗಳಲ್ಲಿ 1, 100 ಮಕ್ಕಳನ್ನು ರಕ್ಷಿಸಲಾಗಿದೆ ಎಂದು  ಆರ್ ಪಿಎಫ್ ರಕ್ಷಣಾ ಆಯುಕ್ತೆ ದೆಬಾಸ್ಮೀತಾ ಚಟ್ಟೋಪಾಧ್ಯಾಯ  ತಿಳಿಸಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣದಲ್ಲಿ  ಮಾನವ ಕಳ್ಳ ಸಾಗಣೆ ವಿರೋಧಿ ದಿನದ ಅಂಗವಾಗಿ ಅಂತಾರಾಷ್ಟ್ರೀಯ ನ್ಯಾಯ ಆಯೋಗ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ  ಪ್ರಯಾಣಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಕಳ್ಳತನದಂತಹ ಕೃತ್ಯಕ್ಕೆ ರೈಲುಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ರಾಜ್ಯಾದ್ಯಂತ ನಡೆಯುತ್ತಿದೆ. ಇಂತಹ ಕೃತ್ಯಗಳನ್ನು ತಡೆಗಟ್ಟುವ ಸಲುವಾಗಿ ಆರ್ ಪಿಎಫ್ ಅನೇಕ ಬಾರಿ ರಕ್ಷಣಾ ಕಾರ್ಯಾಚರಣೆ  ಕೈಗೊಂಡಿದ್ದೆ.  ರೈಲು ನಿಲ್ದಾಣಗಳಲ್ಲಿ ಮಕ್ಕಳು ಅಥವಾ ಮಹಿಳೆಯರ ಕಳ್ಳ ಸಾಗಣೆ ಬಗ್ಗೆ  ಅನುಮಾನ ಕಂಡುಬಂದಲ್ಲಿ ಆರ್ ಪಿಎಫ್ ಸಹಾಯವಾಣಿ 182 ಕ್ಕೆ ಮಾಹಿತಿ ನೀಡುವಂತೆ  ಪ್ರಯಾಣಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಚಟ್ಟೋಪಾಧ್ಯಾಯ  ತಿಳಿಸಿದರು.

ಐಜಿಎಂ ಸಹಾಯಕ ನಿರ್ದೇಶಕಿ ಎಂ. ಪ್ರತಿಭಾ ಮಾತನಾಡಿ, ಕಳ್ಳಸಾಗಣೆ  ಜಾಲಕ್ಕೊಳಪಟ್ಟವರು ಜೀತದಾಳುಗಳಾಗಿ ನರಳುವಂತಾಗಿದೆ.  ಸಹಸ್ರಾರು ಜನರ ಸ್ವಾತಂತ್ರ್ಯ, ಘನತೆ ಹಾಗೂ ಮನುಷ್ಯತ್ವವೇ ಕಳ್ಳತನವಾಗುತ್ತಿದೆ ಎಂದರು.

ನಗರ ಮೂಲದ ನೆಮ್ಮದಿ ತಂಡದಿಂದ  ಬೆಂಗಳೂರು ನಗರ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮಾನವ ಕಳ್ಳ ಸಾಗಣೆ ಕುರಿತ ಬೀದಿ ನಾಟಕ ಪ್ರದರ್ಶಿಸಲಾಯಿತು.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಾಹಿತಿ ಪ್ರಕಾರ 1976 ರಿಂದ 2015ರವರೆಗೂ  ಕರ್ನಾಟಕದಲ್ಲಿ 65 ಸಾವಿರ ಜೀತದಾಳುಗಳನ್ನು ರಕ್ಷಣೆ ಮಾಡಲಾಗಿದೆ. ಇದು ದೇಶದಲ್ಲಿಯೇ ಎರಡನೇ ಅತಿದೊಡ್ಡ ಸಂಖ್ಯೆಯದ್ದಾಗಿದೆ.

SCROLL FOR NEXT