ಬೆಂಗಳೂರು: ನಾಳೆ ಅಥವಾ ನಾಡಿದ್ದು, ಬೆಂಗಳೂರಿಗೆ ಮುಂಗಾರು ಪ್ರವೇಶಿಸುವ ನಿರೀಕ್ಷೆ ಇದೆ. ಇಂದೂ ಕೂಡಾ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ನಿನ್ನೆ ಮಧ್ಯಾಹ್ನದ ನಂತರ ನಗರದಲ್ಲಿ ಸಾಧಾರಣ ಮಳೆಯಾಗಿದೆ. ಮುಂಗಾರು ಪ್ರವೇಶಿಸಲು ಎರಡ್ಮೂರು ದಿನಗಳು ಬೇಕಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವೆಬ್ ಸೈಟ್ ಮಾಹಿತಿ ಪ್ರಕಾರ ಇಂದು 6. 50 ಮಿಲಿ ಮೀಟರ್ ನಷ್ಟು ಮಳೆ ಬೀಳಲಿದೆ. ಇಂದಿನಿಂದ ಬುಧವಾರದವರೆಗೂ ಮೋಡ ಕವಿದ ವಾತಾವರಣವಿರಲಿದ್ದು, ಒಂದೆರಡು ಸಲ ಮಳೆಯಾಗುವ ಸಾಧ್ಯತೆ ಇದೆ.ಗುರುವಾರ ಮತ್ತು ಶುಕ್ರವಾರವೂ ಮಳೆಯಾಗುವ ನಿರೀಕ್ಷೆ ಇದೆ.
ಈ ಮಧ್ಯೆ ನಿನ್ನೆ ಸುರಿದ ಮಳೆಯಿಂದಾಗಿ 18 ಮರಗಳು ಬಿದ್ದಿರುವ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ದೂರು ಬಂದಿದೆ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಶಿವಾನಂದ ವೃತ್ತ, ಆನೇಪಾಳ್ಯ, ಬಿಟಿಎಸ್ ರಸ್ತೆ, ಮತ್ತಿತರ ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, 43 ವಿದ್ಯುತ್ ಕಂಬಗಳು ನೆಲಕ್ಕುರುಳಿರುವ ಬಗ್ಗೆ ಬೆಸ್ಕಾಂನಲ್ಲಿ ದೂರು ದಾಖಲಾಗಿದೆ.
ರಸ್ತೆಗಳನ್ನು ತೆರವುಗೊಳಿಸಲು ನಾಗರಿಕ ರಕ್ಷಣಾ ತಂಡಗಳನ್ನು ನಿಯೋಜಿಸಲಾಯಿತು ಎಂಬ ಮಾಹಿತಿ ತಿಳಿದುಬಂದಿದೆ.