ರಾಜ್ಯ

ಕ್ಯಾಬ್ ಚಾಲಕರ ಸಮಸ್ಯೆ ಬಗೆಹರಿಸಲು ಸಮಿತಿ ರಚನೆಗೆ ಸಿಎಂ ಆದೇಶ

Sumana Upadhyaya

ಬೆಂಗಳೂರು: ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಕ್ಯಾಬ್ ಚಾಲಕರಿಂದ ಪ್ರಯಾಣಿಕರು ವಿಶೇಷವಾಗಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ಅವುಗಳನ್ನು ಬಗೆಹರಿಸಲು ಸರ್ಕಾರ ಮುಂದಾಗಿದೆ.

ಬೆಂಗಳೂರಿನಲ್ಲಿ ನಿನ್ನೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಹಲವು ಕ್ಯಾಬ್ ಚಾಲಕರ ಒಕ್ಕೂಟಗಳು ಒಲಾ ಮತ್ತು ಉಬರ್ ಮುಕ್ತ ಕರ್ನಾಟಕಕ್ಕೆ ಒತ್ತಾಯಿಸಿದರೆ ಕ್ಯಾಬ್ ದಲ್ಲಾಳಿಗಳ ಪ್ರತಿನಿಧಿಗಳು ಕ್ಯಾಬ್ ಚಾಲಕರು ಮತ್ತು ಕ್ಯಾಬ್ ಮಾಲಿಕರ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಆದೇಶ ನೀಡಿ, ಸಮಿತಿ ರಚಿಸುವಂತೆ ಸೂಚಿಸಿದರು. ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿಗಳು ಮತ್ತು ಕ್ಯಾಬ್ ದಲ್ಲಾಳಿಗಳು, ಹಲವು ಕ್ಯಾಬ್ ಚಾಲಕರ ಒಕ್ಕೂಟಗಳ ಪದಾಧಿಕಾರಿಗಳು ಹಾಜರಿದ್ದರು. ಕ್ಯಾಬ್ ಚಾಲಕರಿಗೆ ಬಾಕಿ ವೇತನ ಪಾವತಿ ಮಾಡದಿರುವುದು, ಭರವಸೆಯ ಪ್ರೋತ್ಸಾಹಕ ವೇತನ ನೀಡದಿರುವುದು, ಕ್ಯಾಬ್ ದಲ್ಲಾಳಿಗಳಿಗೆ ಗ್ರಾಹಕ ಸೇವಾ ಕೇಂದ್ರಗಳಿಲ್ಲದಿರುವುದು ಮೊದಲಾದವುಗಳ ಕುರಿತು ಚರ್ಚೆ ನಡೆಸಲಾಯಿತು.

ಸಭೆಯ ನಂತರ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ(ಕೆಎಸ್ ಟಿಡಿಸಿ) ಚಾಲಕರ ಒಕ್ಕೂಟದ ಅಧ್ಯಕ್ಷ ಬಸವರಾಜ್ ಬಿ ವೈ, ಕೆಎಸ್ ಟಿಡಿಸಿ ಕ್ಯಾಬ್ ಗಳು ಚಲಾಯಿಸುತ್ತಿರುವ ಚಾಲಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅಪಾರ ನಷ್ಟವುಂಟಾಗುತ್ತಿದೆ. ನಮ್ಮ ಮೇಲೆ ಹೇರುವ ಅಧಿಕ ಪಾರ್ಕಿಂಗ್ ಶುಲ್ಕವನ್ನು ಕಡಿಮೆ ಮಾಡಿ ಎಂದು ಮುಖ್ಯಮಂತ್ರಿಯನ್ನು ಕೇಳಿಕೊಂಡಿದ್ದೇವೆ. ಅಧಿಕ ಪಾರ್ಕಿಂಗ್ ಶುಲ್ಕದಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವವರು ಸುಮಾರು 20,000 ರೂಪಾಯಿ ಪಾರ್ಕಿಂಗ್ ಶುಲ್ಕ ನೀಡಬೇಕಾಗುತ್ತದೆ ಎಂದರು.

ಒಲಾ, ಟ್ಯಾಕ್ಸಿಫಾರ್ ಶ್ಯುವರ್ ಮತ್ತು ಉಬರ್ ಚಾಲಕರು ಮತ್ತು ಮಾಲಿಕರ ಸಂಘದ ಅಧ್ಯಕ್ಷ ತನ್ವೀರ್ ಪಾಶಾ ಮಾತನಾಡಿ, ಕ್ಯಾಬ್ ಚಾಲಕರ ದಿನನಿತ್ಯದ ಸಂಪಾದನೆ ಕಡಿಮೆಯಾಗಿದೆ. ಅವರು ಅನಿವಾರ್ಯವಾಗಿ ಹೆಚ್ಚಿನ ಅವಧಿ ಕೆಲಸ ಮಾಡಬೇಕಾಗಿದೆ. ಲಾಭದಲ್ಲಿ ಕಂಪೆನಿ ಹೆಚ್ಚಿನ ಮೊತ್ತ ಪಡೆದುಕೊಂಡರೆ ಬಂಡವಾಳ ಹಾಕಿ ವಾಹನವನ್ನು ನಿರ್ವಹಿಸುತ್ತಿರುವ ಚಾಲಕರಿಗೆ ಏನೂ ಲಾಭ ಸಿಗುವುದಿಲ್ಲ ಎನ್ನುತ್ತಾರೆ.

ರಾಜ್ಯಾದ್ಯಂತ ಎಲ್ಲಾ ಕ್ಯಾಬ್ ಗಳಿಗೆ ಏಕರೂಪ ಬೆಲೆ ವ್ಯವಸ್ಥೆ ಜಾರಿಗೆ ತರಬೇಕೆಂದು ಕರ್ನಾಟಕ ಟ್ಯಾಕ್ಸಿ ಮಾಲಿಕರು, ಚಾಲಕರು ಮತ್ತು ನಿರ್ವಾಹಕರ ಒಕ್ಕೂಟದ ಎಸ್ ಹಮೀದ್ ಅಕ್ಬರ್ ಆಲಿ ಒತ್ತಾಯಿಸಿದ್ದಾರೆ.

SCROLL FOR NEXT