ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೇಜರಾಜ್ ಶರ್ಮಾ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳು ಮತ್ತು ಫರ್ನಿಚರ್ ಡೀಲರ್ ಗಳ ವಿರುದ್ಧ ದಾಖಲಿಸುತ್ತಿದ್ದ ಸುಳ್ಳು ದೂರುಗಳನ್ನು ವಜಾಗೊಳಿಸಿದ್ದರಿಂದ ಕುಪಿತಗೊಂಡ ಆರೋಪಿ ತೇಜ್ರಾಜ್ , ಶೆಟ್ಟಿ ಅವರಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿದ, ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಿದ್ದ ಎಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ದಾಖಲಿಸಿದ್ದಾರೆ.
58 ಸಾಕ್ಷಿಗಳು, 145 ದಾಖಲೆಗಳ ಸಹಿತ 600ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿಯನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಡಿಸಿಪಿ ಜೀನೇಂದ್ರ ಖಣಗಾವಿ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಚಾಕು ಹಿಡಿದುಕೊಂಡು ಹೋಗಿದ್ದ ತೇಜರಾಜ್ ಲೋಕಾಯುಕ್ತರನ್ನು ಹೆದರಿಸಲು ಹೋಗಿದ್ದ, ಚಾಕುವಿನಿಂದ ಬೆದರಿಸಿ ಕೇಸ್ ಗಳನ್ನು ಮತ್ತೆ ಓಪನ್ ಮಾಡುವಂತೆ ಕೇಳಲು ಹೋಗಿದ್ದ. ಆದರೆ ಅವನನ್ನು ಪೊಲೀಸರಿಗೆ ಹಿಡಿದುಕೊಡುವುದಾಗಿ ಶೆಟ್ಚಿ ಹೇಳಿದ ಮೇಲೆ ಭಯಗೊಂಡ ಆತ ಅವರಿಗೆ ಚಾಕುವಿನಿಂದ ಇರಿದಿದ್ದಾನೆ.
ಆರು ವಿವಿಧ ಇಲಾಖೆಗಳ 17 ಅಧಿಕಾರಿಗಳ ವಿರುದ್ಧ ಆದು ಕೇಸ್ ಗಳನ್ನು ದಾಖಲಿಸಿದ್ದ,.ಅದರಲ್ಲಿ ಸೂಕ್ತ ಸಾಕ್ಷ್ಯಾಧಾರವಿಲ್ಲದೇ ಮೂರು ಕೇಸ್ ಗಳನ್ನು ಕ್ಲೋಸ್ ಮಾಡಲಾಗಿತ್ತು.
ಸುಳ್ಳು ದೂರು ದಾಖಲಿಸಿ ಸರಕಾರಿ ಅಧಿಕಾರಿಗಳನ್ನು ಸುಲಿಗೆ ಮಾಡಲು ತೇಜ್ರಾಜ್ ಯತ್ನಿಸುತ್ತಿದ್ದ. ಓಂ ಎಂಟರ್ ಪ್ರೈಸಸ್ ಮಾಲೀಕ ವೈಎಂ ಅಶೋಕ್ ಎಂಬುವರ ಬಳಿ 1.71 ಲಕ್ಷ ರೂ. ಸುಲಿಗೆ ಮಾಡಿದ್ದ. ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಕರಣಗಳು ಬಾಕಿ ಉಳಿದಷ್ಟು ದಿನವೂ ತಾನು ಅಧಿಕಾರಿಗಳನ್ನು ಸುಲಿಗೆ ಮಾಡಬಹುದು ಎಂಬ ಸಂಚು ರೂಪಿಸಿದ್ದ.
ಆದರೆ, ಮೂರು ಪ್ರಕರಣಗಳು ಮುಕ್ತಾಯಗೊಂಡಿದ್ದ ಕಾರಣ ಲೋಕಾಯುಕ್ತರ ಮೇಲೆ ಕುಪಿತಗೊಂಡಿದ್ದ. ಈ ಕುರಿತು ಲೋಕಾಯುಕ್ತರನ್ನು ಕೇಳಲು ಹೋದಾಗ, '' ಸಾಕ್ಷ್ಯಾಧಾರಗಳು ಇಲ್ಲದಿದ್ದರೆ ಮುಕ್ತಾಯಗೊಳಿಸಲಾಗುತ್ತದೆ. ಅಂತಹ ಬಲವಾದ ಸಾಕ್ಷಿಗಳಿದ್ದರೆ ಒದಗಿಸಿ. ಇಲ್ಲದಿದ್ದರೆ ಸಂಸ್ಥೆಯ ಸಮಯ ವ್ಯರ್ಥ ಮಾಡಬೇಡಿ,''ಎಂದು ಬುದ್ದಿವಾದ ಹೇಳಿದ್ದರು.
ಹೀಗಾಗಿ, ಕುಪಿತಗೊಂಡ ತೇಜ್ರಾಜ್, ನಗರದ ಸಂಡೇ ಬಜಾರ್ನಲ್ಲಿ ಚಾಕು ಖರೀದಿ ಮಾಡಿ ಲೋಕಾಯುಕ್ತಕ್ಕೆ ತೆರಳಿ ನ್ಯಾ.ವಿಶ್ವನಾಥ ಶೆಟ್ಟಿ ಅವರನ್ನು ಕೊಲೆ ಮಾಡಲು ಚಾಕುವಿನಿಂದ ಇರಿದಿದ್ದ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಇನ್ನೂ ಪ್ರಕರಣದ ಬಗ್ಗೆ ನ್ಯಾಯಮೂರ್ತಿ ಪಿ,. ವಿಶ್ವನಾಥ ಶೆಟ್ಟಿ ಅವರು ತನಿಖಾಧಿಕಾರಿಗೆ ಹೇಳಿಕೆ ನೀಡಿದ್ದು, ಮಾರ್ಚ್ 13 2018ರಂದು ತಮ್ಮ ಕಚೇರಿಗೆ ಬಂದಿದ್ದ ತೇಜ್ ರಾಜ್ ಶರ್ಮಾ, ತನ್ನ ಶರ್ಟ್ ಒಳಗಿಂದ ಚಾಕು ತೆಗೆದು ನನ್ನ ಮೇಲೆ ಮನ ಬಂದಂತೆ ಚಾಕುವಿನಿಂದ ಇರಿದ ಎಂದು ಹೇಳಿದ್ದಾರೆ.
ಅವನು ಕಚೇರಿಗೆ ಬಂದಿದ್ದ ವೇಳೆ ನಿಮಗೆ ದೇವರು ಒಳ್ಳೆಯದು ಮಾಡಲ್ಲ ಎಂದು ಗೊಣಗಿದ್ದ. ನಾನು ಆ ವೇಳೆಯಲ್ಲಿಯೇ ನಮ್ಮ ಸಿಬ್ಬಂದಿಯನ್ನು ಕರೆಯಬೇಕಿತ್ತು, ಆದರೇ ಯಾರಿಂದಲೂ ನಾನು ದಾಳಿಯನ್ನು ನಿರೀಕ್ಷಿಸರಲಿಲ್ಲ, ನಾನು ಯಾವಾಗಲೂ ಜನರಿಗೆ ಒಳ್ಳೆಯದನ್ನೇ ಮಾಡುತ್ತೇನೆ ಎಂಬು ಭಾವಿಸಿದ್ದೆ. ಸಮಾಜ ಹಾಗೂ ಬಡಜನರ ಬಗ್ಗೆ ನನಗೆ ಸಾಕಷ್ಟು ಸಹನಾಭೂತಿ ಹಾಗೂ ಕರುಣೆ ಇದೆ ಎಂದು ಹೇಳಿದ್ದಾರೆ.