ಗೌರಿ ಲಂಕೇಶ್ ಹಾಗೂ ಪರಶುರಾಮ ವಾಗ್ಮೋರೆ (ಸಂಗ್ರಹ ಚಿತ್ರ
ಬೆಂಗಳೂರು; ಹಿರಿಯ ಪತ್ರಕ್ರತೆ ಗೌರಿ ಲಂಕೇಶ್ ಅವರಿಗೆ ಗುಂಡು ಹಾರಿಸಿದ್ದು ಪರಶುರಾಮನೇ ಎಂದು ಅಂದಿನ ಹತ್ಯೆ ಕೃತ್ಯದ ಪ್ರತ್ಯದರ್ಶಿಗಳಾದ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿ ಸೇರಿ ಇಬ್ಬರು ಗುರುತು ಪತ್ತೆ ಹಚ್ಚಿದ್ದಾರೆಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.
ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಹಿನ್ನಲೆಯಲ್ಲಿ ಪರಶುರಾಮ್ ಶೂಟರ್ ಎಂಬುದಕ್ಕೆ ಬಹುಮುಖ್ಯ ಸಾಕ್ಷ್ಯವು ವಿಶೇಷ ತನಿಖಾ ದಳ (ಎಸ್ಐಟಿ)ಗೆ ಲಭ್ಯವಾದಂತಾಗಿದೆ.
ಆರೋಪಿ ಪರಶುರಾಮ ವಾಗ್ಮೋರೆ ಹತ್ಯೆ ಕೃತ್ಯ ಎಸಗಿದ ಬಳಿಕ ಬೈಕ್ ನಲ್ಲಿ ಪರಾರಿಯಾಗುವಾಗ ಪರಶುರಾಮನನ್ನು ಮೂವರು ಕೂಲಿ ಕಾರ್ಮಿಕರು ಹಾಗೂ ರಾಯಚೂರು ಮೂಲದ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ನೋಡಿದ್ದರು.
ಗೌರಿ ಮನೆಯ ಹತ್ತಿರದಲ್ಲಿಯೇ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ದಿನಗೂಲಿ ಕಾರ್ಮಿಕ ಕಾರ್ಯನಿರ್ವಹಿಸುತ್ತಿದ್ದ. ಕಾರ್ಮಿಕ ಮೂತ್ರ ವಿಸರ್ಜನೆಗೆಂದು ಬಂದಾಗ ಗೌರಿ ಲಂಕೇಶ್ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ ಹಂತಕರು ಪರಾರಿಯಾಗುತ್ತಿರುವುದನ್ನು ಕಾರ್ಮಿಕ ನೋಡಿದ್ದಾನೆ.
ಹತ್ಯೆ ಪ್ರಕರಣ ಸಂಬಂಧ ಈ ಹಿಂದೆಯಷ್ಟೇ ಹಂತಕರ ಶಂಕಿತ ಭಾವಚಿತ್ರವನ್ನು ರಚಿಸಿದ್ದರು. ಪರಶುರಾಮ ವಾಗ್ಮೋರೆ ಬಂಧನದ ಬಳಿಕ ಸಿಐಡಿಗೆ ಕಚೇರಿಗೆ ಆಗಮಿಸಿದ್ದ ನಾಲ್ವರೂ ಪ್ರತ್ಯಕ್ಷದರ್ಶಿಗಳ ಪೈಕಿ ವಿದ್ಯಾರ್ಥಿ ಮತ್ತು ಕಾರ್ಮಿಕ, ತಾವು ಗೌರಿ ಅವರ ಮನೆ ಬಳಿ ಬೈಕ್ ನಲ್ಲಿ ಹೋಗುವಾಗ ನೋಡಿದ್ದು ಪರಶುರಾಮನೇ ಎಂದು ಹೇಳಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಸಿಂದಗಿಯಲ್ಲಿ ಬಂಧಿಸಿ ಕರೆತರಲಾದ ಪರಶುರಾಮ್ ಎದುರಿಗೆ ಇಬ್ಬರು ಪ್ರತ್ಯಕ್ಷದರ್ಶಿಗಳನ್ನು ನಿಲ್ಲಿಸಿದ್ದೆವು. ಆಗ ಆರೋಪಿಯ ಗುರುತನ್ನು ಅವರು ಪತ್ತೆ ಹಚ್ಚಿದರು. ಬೈಕ್ ನ ಹಿಂಬದಿ ಸೀಟ್ ನಲ್ಲಿ ಪರಶುರಾಮನೇ ಕುಳಿತುಕೊಂಡಿದ್ದು ಅಂದು ಆತನ ಮುಖ ನಮಗೆ ಸ್ಪಷ್ಟವಾಗಿ ಕಾಣುತ್ತಿತ್ತು ಎಂಬುದಾಗಿ ಆ ಇಬ್ಬರು ಸಾಕ್ಷಿ ನುಡಿದಿದ್ದಾರೆಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಇದಲ್ಲದೆ, ಈ ಹಿಂದೆ ರಚಿಸಲಾಗಿದ್ದ ಮೂರು ಶಂಕಿತರ ಭಾವಚಿತ್ರಗಳ ಪೈಕಿ ಒಂದು ಭಾವಚಿತ್ರ ಶೇ.80ರಷ್ಟು ಪರಶುರಾಮ ವಾಗ್ಮೋರೆಯನ್ನು ಹೋಲುತ್ತಿದೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos