ಹಾಸನ: ಜೂನ್ 16 ರಂದು ನಾಪತ್ತೆಯಾಗಿದ್ದ 10 ನೇ ತರಗತಿ ವಿದ್ಯಾರ್ಥಿನಿ ಮಾಧುರ್ಯ ಮೃತದೇಹ ಹಾಸ್ಟೆಲ್ ಕೊಠಡಿಯಲ್ಲಿ ಶನಿವಾರ ಪತ್ತೆಯಾಗಿದೆ.
ಮಾಧುರ್ಯ ಪೋಷಕರು ದಾಖಲಿಸಿದ್ದ ನಾಪತ್ತೆ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು ಇಲ್ಲಿನ ಸರ್ಕಾರಿ ಮೆಟ್ರಿಕ್ ಪೂರ್ವ ಹಾಸ್ಟೆಲ್ ನ ಕೊಠಡಿ ಪರಿಶೀಲಿಸಿದಾಗ ಆಕೆಯ ಮತೃದೇಹ ಕಂಡುಬಂದಿದೆ.
ಮಾಧುರ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಶ್ಚರ್ಯವೆಂದರೆ ಆಕೆ ಕೊಠಡಿಯಲ್ಲಿ ಸತ್ತು ಬಿದ್ದಿದ್ದರೂ ವಾರ್ಡನ್ ಗೆ ಆಗಲೀ ಅಥವಾ ಆಕೆಯ ಗೆಳತಿಯರಿಗಾಗಲೀ ಈ ವಿಷಯ ಗೊತ್ತೆ ಆಗಿಲ್ಲ.
ಮೂಲಗಳ ಪ್ರಕಾರ ಹಾಸನ ತಾಲೂಕು ಮಲ್ಲದೇವನಹಳ್ಳಿ ಗ್ರಾಮದ ಮಾಧುರ್ಯ, ಜೂನ್ 16 ರಂದು ತನ್ನ ಸ್ನೇಹಿತೆಯರೊಂದಿಗೆ ಮೈಸೂರು ಪ್ರವಾಸಕ್ಕೆ ತೆರಳಿದ್ದಳು. ಆಗ್ಗಿನಿಂದಲೂ ನಾಪತ್ತೆಯಾಗಿದ್ದಳು. ಆಕೆಯ ಸ್ನೇಹಿತೆಯರೆಲ್ಲರೂ ಅಂದೇ ವಾಪಾಸ್ಸಾಗಿದ್ದಾರೆ. ಆದರೆ, ಮಾಧುರ್ಯ ತನ್ನ ಸ್ನೇಹಿತೆಯರೆಲ್ಲರೂ ಮೈಸೂರು ಬಿಟ್ಟ ನಂತರ ಪ್ರತ್ಯೇಕವಾಗಿ ವಾಪಾಸ್ಸಾಗಿದ್ದಾಳೆ.
ಮೈಸೂರಿನಲ್ಲಿ ಸ್ನೇಹಿತೆಯರೆಲ್ಲರೂ ತೆರಳಿದ ನಂತರ ಮಾಧುರ್ಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕೆ. ಆರ್. ನಗರದ ಅರುಣ್ ಕುಮಾರ್, ಚಾಮರಾಜನಗರದ ಮಹೇಶ್, ಹಾಗೂ ಹಾಸನ ತಾಲೂಕು ಚೌಡೇನಹಳ್ಳಿಯ ಶರತ್ ರಾಜ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.