ರೇವಣ್ಣ-ಡಿಕೆಶಿ ನಡುವಿನ ಶೀಥಲ ಸಮರ: 19 ಮುಖ್ಯ ಇಂಜಿನಿಯರ್ ಗಳ ಸ್ಥಿತಿ ಅತಂತ್ರ!
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಪ್ರಾರಂಭದಿಂದಲೂ ಇದ್ದ ಡಿ.ಕೆ ಶಿವಕುಮಾರ್ ಹಾಗೂ ಹೆಚ್ ಡಿ ರೇವಣ್ಣ ನಡುವಿನ ಶೀಥಲ ಸಮರ ಈಗ ಅಧಿಕಾರಿಗಳ ವರ್ಗಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ ಲೋಕೋಪಯೋಗಿ ಇಲಾಖೆಯ 19 ಮುಖ್ಯ ಇಂಜಿನಿಯರ್ ಗಳು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.
ಕಳೆದ ತಿಂಗಳು, ಸೂಪರಿಂಟೆಂಡೆಂಟ್ ಎಂಜಿನಿಯರ್ ಹುದ್ದೆಗೆ ಬಡ್ತಿ ಪಡೆದಿದ್ದವರೂ ಸೇರಿ ಒಟ್ಟು 19 ಜನ ಮುಖ್ಯ ಇಂಜಿನಿಯರ್ ಗಳನ್ನು ಲೋಕೋಪಯೋಗಿ ಇಲಾಖೆಯಿಂದ ಜಲಸಂಪನ್ಮೂಲ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಜಲಸಂಪನ್ಮೂಲ ಇಲಾಖೆ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಹೆಚ್ ಡಿ ರೇವಣ್ಣ ತಿಕ್ಕಾಟದಿಂದಾಗಿ ವರ್ಗಾವಣೆಗೊಂಡಿರುವ ಇಂಜಿನಿಯರ್ ಗಳು ನೀರಾವರಿ ಇಲಾಖೆಯಲ್ಲಿ ಇನ್ನೂ ಅಧಿಕಾರ ವಹಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ.
ವರ್ಗಾವಣೆಗೊಂಡಿರುವ ಅಧಿಕಾರಿಗಳಿಗೆ ಹಾಲಿ ಅಧಿಕಾರಿಗಳು ಅಧಿಕಾರ ಹಸ್ತಾಂತರ ಮಾಡದೇ ಇರುವುದರಿಂದ 19 ಇಂಜಿನಿಯರ್ ಗಳ ಸ್ಥಿತಿ ಅತಂತ್ರವಾಗಿದೆ. ಪಿಡಬ್ಲ್ಯೂಡಿ ಇಲಾಖೆಯಿಂದ ನಡೆದಿರುವ ಅಧಿಕಾರಿಗಳ ವರ್ಗಾವಣೆಯ ಬಗ್ಗೆ ನೀರಾವರಿ ಸಚಿವರಿಗೆ ಅಸಮಾಧಾನ ಉಂಟುಮಾಡಿದ್ದು, ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ, ಅಷ್ಟೇ ಅಲ್ಲದೇ ಈ ವಿಷಯದಲ್ಲಿ ರೇವಣ್ಣ ಪ್ರಾಬಲ್ಯ ತೋರುತ್ತಿದ್ದಾರೆ, ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜಲಸಂಪನ್ಮೂಲ ಇಲಾಖೆಗೆ ಇಂಜಿನಿಯರ್ ಗಳನ್ನು ಹೇಗೆ ವರ್ಗಾವಣೆ ಮಾಡಲಾಗಿದೆ ಎಂದೂ ಆಕ್ರೋಶಗೊಂಡಿದ್ದಾರೆ.
ಪಿಡಬ್ಲ್ಯೂಡಿ ಇಲಾಖೆ ಸಿವಿಲ್ ಇಂಜಿನಿಯರ್ ಗಳಿಗೆ ಮಾತೃ ಇಲಾಖೆಯಾಗಿದ್ದರೂ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆಯ ಇಲಾಖೆ ಹಾಗೂ ವರ್ಗಾವಣೆ ಮಾಡುತ್ತಿರುವ ಇಲಾಖೆಯ ಗಮನಕ್ಕೆ ತಂದೇ ವರ್ಗಾವಣೆ ನಡೆಯುತ್ತದೆ. ಆದರೆ ಈ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಜಲಸಂಪನ್ಮೂಲ ಇಲಾಖೆಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವಾಗ ತಮ್ಮನ್ನು ಲೋಕೋಪಯೋಗಿ ಇಲಾಖೆ ಸಚಿವರು ಸಂಪರ್ಕಿಸಿರಲಿಲ್ಲ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಡಿಕೆಶಿ-ರೇವಣ್ಣ ನಡುವಿನ ಶೀಥಲ ಸಮರಕ್ಕೆ ಕಳೆದ ಒಂದು ತಿಂಗಳಿನಿಂದ ಕೆಲಸವಿಲ್ಲದೇ, ವರ್ಗಾವಣೆಗೊಂಡಿರುವ ಇಲಾಖೆಯಲ್ಲಿ ಅಧಿಕಾರವನ್ನೂ ವಹಿಸಿಕೊಳ್ಳಲಾಗದೇ ಇಂಜಿಯರ್ ಗಳು ಅತಂತ್ರ ಸ್ಥಿತಿ ಎದುರಿಸುತ್ತಿದ್ದು ಈ ವಿಷಯ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos