ವಿಜಯಪುರ: ಬಸ್ ಕಾಯುತ್ತಿದ್ದ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ, ಇಬ್ಬರ ಬಂಧನ
ವಿಜಯಪುರ: ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ವಿಜಯಪುರ ಜಿಲ್ಲೆ ಇಂಡಿ ಪೋಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಇಂಡಿ ಬಸ್ ನಿಲ್ದಾಣದಲ್ಲಿದ್ದ ಮಹಿಳೆಯನ್ನು ಬಲವಂತವಾಗಿ ಕಾರ್ ಒಳ ತಳ್ಳಿ ಅಪಹರಿಸಿದ ಯುವಕರು ಇಂಡಿ ಹೊರವಲಯದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.
ಗೋವಾ ನಿವಾಸಿಯಾದ ಸಂತ್ರಸ್ತ ಮಹಿಳೆ (35) ಕೌಟುಂಬಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂಡಿಗೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಮತ್ತೆ ಗೋವಾಗೆ ಹಿಂತಿರುಗುವ ವೇಳೆ ಈ ಘಟನೆ ನಡೆದಿದೆ.
ಗುರುವಾರ ರಾತ್ರಿ ಸುಮಾರು 11.30ರ ವೇಳೆಗೆ ತಮ್ಮ ಕಾರ್ ನೊಡನೆ ಇಂಡಿ ಬಸ್ ನಿಲ್ದಾಣ ಪ್ರವೇಶಿಸಿದ ರಿಯಾಜ್ (32) ಮತ್ತು ತ್ರಿಮೂರ್ತಿ (28) ಬಸ್ ನಿಲ್ದಾಣದಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಗಮನಿಸಿದ್ದಾರೆ. ಆಕೆಯ ಸುತ್ತ ಯಾರೂ ಇಲ್ಲದ್ದನ್ನು ಕಂಡ ಆರೋಪಿಗಳು ಆಕೆಯ ಬಳಿ ಸಾರಿ ’ನಾವು ನಿಮ್ಮನ್ನು ಗೋವಾಗೆ ಡ್ರಾಪ್ ಮಾಡುತ್ತೇವೆ’ ಎಂದಿದ್ದಾರೆ. ಮಹಿಳೆ ಇವರ ಕೋರಿಕೆ ಮನ್ನಿಸದಿದ್ದಾಗ ಬಲವಂತವಾಗಿ ಆಕೆಯನ್ನು ಕಾರಿನಲ್ಲಿ ತಳ್ಳಿದ ಆರೋಪಿಗಳು ನಗರದ ಹೊರವಲಯಕ್ಕೆ ತೆರಳಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಬಸ್ ನಿಲ್ದಾಣದಲ್ಲಿದ್ದ ಓರ್ವ ಬಸ್ ಚಾಲಕ ಇದನ್ನು ಗಮನಿಸಿ ಪ್ರಕರಣ ಕುರಿತಂತೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೋಲೀಸರು ಅರ್ಧ ಗಂಟೆಯಲ್ಲಿಯೇ ಆರೋಪಿ ಯುವಕರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ೦, 363 (ಅಪಹರಣ) ಗಳಡಿ ಪ್ರಕರಣ ದಾಕಲಿಸಿಕೊಳ್ಳಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos