ಕಾರವಾರ: ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಅವರಿದ್ದ ಕಾರ್ ಮತ್ತೆ ಅಪಘಾತಕ್ಕೀಡಾಗಿದೆ.
ಶಿರಸಿಯಿಂದ ಕುಮಟಾಗೆ ತೆರಳುವಾಗ ಇನ್ನೋವಾ ಕಾರೊಂದು ಅನಂತಕುಮಾರ ಹೆಗಡೆಯವರ ಬೆಂಗಾವಲು ವಾಹನಕ್ಕೆ ಅಡ್ಡವಾಗಿದೆ. ಆಗ ಬೆಂಗಾವಲು ವಾಹನ ಚಾಲಕ ಒಮ್ಮೆಗೇ ಬ್ರೇಕ್ ಹಾಕಿದ್ದ ಕಾರಣ ಸಚಿವರ ಕಾರು ಮುಂದಿದ್ದ ಬೆಂಗಾವಲು ವಾಹನಕ್ಕೆ ಗುದ್ದಿದೆ.
ರಾಷ್ಟ್ರೀಯ ಹೆದ್ದಾರಿ 66ರ ಯಾಣ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಇದರಿಂದಾಗಿ ಯಾರಿಗೆ ಗಾಯಗಳಾಗಿಲ್ಲ ಎನ್ನಲಾಗಿದೆ.
ಅಪಘಾತದ ಸಂಬಂಧ ಸಚಿವರು ಟ್ವೀಟ್ ಮಾಡಿದ್ದು "ಕೇವಲ 30 ನಿಮಿಷಗಳ ಹಿಂದೆ ಕುಮಟಾದ ಬಳಿ ನನ್ನ ಕಾರು ಮತ್ತೊಮ್ಮೆ ಅಪಘಾತಕ್ಕೀಡಾಗಿತ್ತು. ಇನ್ನೊಂದು ಜೀವದಾನ ಸಿಕ್ಕಿತು" ಎಂದು ಬರೆದುಕೊಂಡಿದ್ದಾರೆ.
ಪ್ರಕರಣದ ಮಾಹಿತಿ ತಿಳಿದ ಕುಮಟಾ ಪೋಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಒಂದೇ ತಿಂಗಳಿನಲ್ಲಿ ಅನಂತಕುಮಾರ್ ಹೆಗಡೆಯವರ ಕಾರು ಇದು ಎರಡನೇ ಬಾರಿ ಅಪಘಾತಕ್ಕೀಡಾಗಿದೆ.ಏಪ್ರೀಲ್ 18 ರಂದು ಶಿರಸಿಯಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದಾಗ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಹೊರವಲಯದಲ್ಲಿ ಲಾರಿಯೊಂದು ಏಕಾಏಕಿ ಸಚಿವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿತ್ತು.