ಬೆಂಗಳೂರು: ಶಾಸಕ ಎನ್ ಎ ಹ್ಯಾರಿಸ್ ಪುತ್ರ ನಲಪಾಡ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಿಸಿಬಿ ಪೊಲೀಸರು ಚಾರ್ಚ್ ಶೀಟ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ವರದಿಗಳ ಅನ್ವಯ ಉದ್ಯಮಿ ಪುತ್ರ ವಿದ್ವತ್ ಮೇಲೆ ನಲಪಾಡ್ ಹ್ಯಾರಿಸ್ ಮತ್ತು ತಂಡ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಸಿಸಿಬಿ ತನಿಖಾಧಿಕಾರಿಗಳಿಂದ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಸಿಸಿಬಿ ಅಧಿಕಾರಿಗಳು ಎಸಿಎಂಎಂ ಕೋರ್ಟ್ಗೆ ಸುಮಾರು 600 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಚಾರ್ಜ್ಶೀಟ್ನೊಂದಿಗೆ ಕೆಲ ವೈದ್ಯಕೀಯ ವರದಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಲಗತ್ತಿಸಲಾಗಿದೆ ಎನ್ನಲಾಗಿದ್ದು, ಹಲ್ಲೆ ಪ್ರಕರಣದ ಆರೋಪಿಗಳಾದ ನಲಪಾಡ್, ಅರುಣ್ ಬಾಬು, ಶ್ರೀಕೃಷ್ಣ, ಮಂಜುನಾಥ್, ಅಶ್ರಫ್, ಬಾಲಕೃಷ್ಣ, ಅಭಿಷೇಕ್ ಹಾಗೂ ನಾಸಿರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಮತ್ತೊಬ್ಬ ಆರೋಪಿ ಕೃಷ್ಣ ಇನ್ನೂ ನಾಪತ್ತೆಯಾಗಿದ್ದು, ಆತ 2014ರಿಂದಲೂ ಮೊಬೈಲ್ ಬಳಸುತ್ತಿಲ್ಲ. ವಿದೇಶದಲ್ಲಿ ಅಡಗಿರಬಹುದು, ಹುಡುಕಾಟ ನಡೆಸುತ್ತಿದ್ದೇವೆ ಎಂದು ವರದಿಯಲ್ಲಿ ಸಿಸಿಬಿ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ.
ಇನ್ನು ಆರೋಪಿಗಳ ವಿರುದ್ದ ದಾಖಲಿಸಲಾಗಿದ್ದ ಕೊಲೆ ಯತ್ನ ಆರೋಪ ಸಾಬೀತಾಗಿದ್ದು, ಸಂಬಂಧಪಟ್ಟ ಪುರಾವೆಗಳನ್ನು ಲಗತ್ತಿಸಲಾಗಿದೆ. ವಿದ್ವತ್, ಆತನ ಸ್ನೇಹಿತರು, ಫರ್ಜಿ ಕೆಫೆ ಸಿಬ್ಬಂದಿ , ಮಲ್ಯ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 60 ಸಾಕ್ಷಿಗಳ ಹೇಳಿಕೆ ಸಂಗ್ರಹ ಮಾಡಲಾಗಿದೆ.
ಕಳೆದ ಫೆಬ್ರವರಿ 17 ರಂದು ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ನಲಪಾಡ್ ಮತ್ತು ಆತನ ಗ್ಯಾಂಗ್ ತೀವ್ರ ಹಲ್ಲೆ ನಡೆಸಿದ್ದರು. ಸದ್ಯ ನಲಪಾಡ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.