ಮಂಡ್ಯ: ರಾಜ್ಯದ ಖ್ಯಾತ ಪ್ರವಾಸಿ ತಾಣ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯೋರ್ವ ಮೊಸಳೆಗೆ ಆಹಾರವಾಗಿರುವ ಧಾರುಣ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಪ್ರವಾಸಿಗನೊಬ್ಬ ಮೊಸಳೆ ಬಾಯಿಗೆ ಆಹಾರವಾದ ದಾರುಣ ಘಟನೆ ಭಾನುವಾರ ನಡೆದಿದೆ. ಇಲ್ಲಿ ಇತಿಹಾಸ ಪ್ರಸಿದ್ಧ ಮುತ್ತತ್ತಿ ಆಂಜನೇಯ ಸ್ವಾಮಿಗೆ ದೇವಾಲಕ್ಕೆ ಕುಟುಂಬದೊಂದಿಗೆ ಬಂದಿದ್ದ 52 ರ ಹರೆಯದ ವೆಂಕಟೇಶ್ ಅವರು ಕಾವೇರಿ ನದಿಯಲ್ಲಿ ಈಜುತ್ತಿದ್ದಾಗ ದಾಳಿ ಮಾಡಿದ ಮೊಸಳೆ ಅವರನ್ನು ಎಳೆದೊಯ್ದಿದೆ. ಈ ವೇಳೆ ಸ್ಥಳದಲ್ಲಿದ್ದವರು ರಕ್ಷಿಸಲು ಯತ್ನಿಸದರೂ ಸಾಧ್ಯವಾಗಲಿಲ್ಲ.
ಬಳಿಕ ಸ್ಥಳೀಯ ಮುಳುಗು ತಜ್ಞರ ನೆರವಿನಿಂದ ನೀರಿನಲ್ಲಿ ಮುಳುಗಿದ್ದ ವೆಂಕಟೇಶ್ ಅವರ ಶವ ಹೊರ ತೆಗೆಯಲಾಗಿದ್ದು, ಅಷ್ಟು ಹೊತ್ತಿಗಾಗಲೇ ವೆಂಕಟೇಶ್ ಸಾವನ್ನಪ್ಪಿದ್ದರು. ಈ ವೇಳೆ ಒಂದು ಕೈ ಮತ್ತು ಒಂದು ಕಾಲನ್ನು ಮೊಸಳೆ ತಿಂದು ಹಾಕಿತ್ತು. ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೊಸಳೆಗಳಿರುವ ಕುರಿತು ಸೂಚನಾ ಫಲಕಗಳಿದ್ದರೂ ಪ್ರವಾಸಿಗರು ಇದನ್ನು ಗಮನಿಸುತ್ತಿಲ್ಲ. ಈ ಬಗ್ಗೆ ಪ್ರವಾಸಿಗರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.