ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿ ಜೈಲು ಪಾಲಾಗಿರುವ ಶಾಸಕ ಎನ್ ಎ ಹ್ಯಾರಿಸ್ ಪುತ್ರ ನಲಪಾಡ್ ಹ್ಯಾರಿಸ್ ಗೆ ಸಧ್ಯಕ್ಕಂತೂ ಬಿಡುಗಡೆ ಭಾಗ್ಯ ಸಿಗುವ ಲಕ್ಷಣಗಳೇ ಕಾಣುತ್ತಿಲ್ಲ.
ನಲಪಾಡ್ ಪ್ರಕರಣ ಸಂಬಂಧ ಇಂದು ನಡೆದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿಕೆ ಮಾಡಿದ್ದು, ಜಾಮೀನು ಅರ್ಜಿ ಸಂಬಂಧ ಇಂದು ವಿಚಾರಣೆ ನಡೆಸಿದ 63ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಮೂರ್ತಿ ಪರಮೇಶ್ವರ್ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ.
ಇನ್ನು ಜಾಮೀನು ಅರ್ಜಿ ಸಂಬಂಧ ಮೊಹಮದ್ ನಲಪಾಡ್ ಪರ ವಕೀಲರಾದ ಉಸ್ಮಾನ್ರ ವಾದ ಪೂರ್ಣವಾಗಿದ್ದು, ನಾಳೆ ವಿದ್ವತ್ ಪರ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಲಿದ್ದಾರೆ. ನಾಳೆ ಮಧ್ಯಾಹ್ನ ಮೂರು ಗಂಟೆಗೆ ವಿಚಾರಣೆ ನಡೆಯಲಿದ್ದು, ನಲಪಾಡ್ಗೆ ಜಾಮೀನು ಭವಿಷ್ಯ ನಾಳೆ ನಿರ್ಧಾರವಾಗುವ ಸಾಧ್ಯತೆ ಇದೆ.
ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿರುವ ಆರೋಪಿಯ ಹೇಳಿಕೆ ಮತ್ತು ಸಾಕ್ಷಿಗಳ ಪ್ರಕಾರ ವಿದ್ವತ್ ಗೆ ಮೂರು ಬಾರಿ ಕೆನ್ನೆಗೆ ಹೊಡೆಯಲಾಗಿದೆ. ಈ ಮೂರು ಏಟುಗಳಿಂದ ಯಾವುದೇ ಕಾರಣಕ್ಕೂ ಪ್ರಾಣಕ್ಕೆ ತೊಂದರೆ ಇಲ್ಲ. ವೈದ್ಯಕೀಯ ವರದಿಯ ಪ್ರಕಾರ, ದೇಹದ ಯಾವುದೇ ಸೂಕ್ಷ್ಮ ಭಾಗಕ್ಕೆ ಎಲ್ಲೂ ಸಹ ಗಾಯವಾಗಿಲ್ಲ. ಹೀಗಾಗಿ ಪೊಲೀಸರು ಸೆಕ್ಷನ್ 307 ಸೇರಿಸಿದ್ದು ಸರಿಯಲ್ಲ. ಇದು ಆಕಸ್ಮಿಕ ಘಟನೆಯಾಗಿದ್ದು, ಕೊಲೆ ಮಾಡುವ ಉದ್ದೇಶವಾಗಲಿ, ಸಿದ್ಧತೆಯಾಗಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಸೆಕ್ಷನ್ 307ರ ಅಡಿ ಬರುವುದಿಲ್ಲ. ಸೆಕ್ಷನ್ 324(ಮಾರಕಾಸ್ತ್ರಗಳಿಂದ ಹಲ್ಲೆ ) ಕೂಡ ಸೇರಿಸಲಾಗಿದೆ. ಆದರೆ, ಹಲ್ಲೆಯಾಗುವ ವೇಳೆ ಯಾವುದೇ ಮಾರಕಾಸ್ತ್ರಗಳನ್ನ ಬಳಸಿಲ್ಲ. ಕೇವಲ ಐಸ್ ಬಕೆಟ್ ಮತ್ತು ಬಾಟಲ್ನಿಂದ ಹಲ್ಲೆಯಾಗಿದೆ. ಇವುಗಳು ಮಾರಕಾಸ್ತ್ರಗಳಲ್ಲ. ಇದರಿಂದ ದೇಹದ ಯಾವುದೇ ಭಾಗಕ್ಕೆ ಇರಿತವಾಗಿಲ್ಲ. ಹೀಗಾಗಿ ಆರೋಪಿಗಳಿಗೆ ಜಾಮೀನು ನೀಡಬೇಕು ಎಂದು ನಲಪಾಡ್ ಪರ ವಕೀಲರಾರ ಉಸ್ಮಾನ್ ವಾದ ಮಂಡಿಸಿದ್ದಾರೆ.