ಬೆಂಗಳೂರು: ರಾಜ್ಯದಲ್ಲೂ ರಾಜಧಾನಿ ದೆಹಲಿ ಮಾದರಿಯಲ್ಲಿಯೇ ಪಟಾಕಿಗೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿಗೆ ತರಲು ಚಿಂತನೆಗಳು ನಡೆಯುತ್ತಿದ್ದು, ಪಟಾಕಿ ಸಿಡಿಸಲು ನಿರ್ದಿಷ್ಟ ಸಮಯ ನಗದಿಯಾಗುವ ಸಾಧ್ಯತೆಗಳಿವೆ.
ಬೆಳಕಿನ ಹಬ್ಬ ದೀಪಾವಳಿಯ 4 ದಿನಗಳ ಕಾಲ ಪ್ರತಿ ದಿನ ಕೇವಲ 2 ಗಂಟೆ ಮಾತ್ರ ಪಟಾಕಿ ಸಿಡಿಸಬೇಕು ಎಂಬ ಬಗ್ಗೆ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಒಪ್ಪಿಗೆ ದೊರೆಯುವುದಷ್ಟೇ ಬಾಕಿಯಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಒಪ್ಪಿಗೆ ನೀಡಿದ ಕೂಡಲೇ ಪಟಾಕಿಗೆ ನಿಯಂತ್ರಣ ಹೇರಿ ಸರ್ಾರ ಸುತ್ತೋಲೆ ಹೊರಡಿಸಲಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಹೊಡೆಯಬೇಕಿದೆ. ಜೊತೆಗೆ ಸರ್ಕಾರ ನಿರ್ಬಂಧ ವಿಧಿಸಿದ ಸ್ಥಳದಲ್ಲಿ ಪಟಾಕಿ ಹೊಡೆಯಬಾರದು ಎಂದ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ವಾಯುಮಾಲಿನ್ಯ ಹಾಗೂ ಶಬ್ಧಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಸೂಚಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಈ ಸಂಬಂಧ ನ.5 ರಂದು ಸೋಮವಾರದಿಂದ ನ.8ರ ಗುರುವಾರದವರೆಗೆ ನಾಲ್ಕು ದಿನಗಳ ಕಾಲ ಮಾತ್ರ ಪಟಾಕಿಗೆ ಅನುಮತಿ ನೀಡಲಾಗುವುದು. ಜೊತೆಗ ರಾತ್ರಿ 2 ಗಂಟೆಗಳ ಕಾಲ ಮಾತ್ರ ಅನುಮತಿ ನೀಡಲು ಸರ್ಕಾರ ಮುಂದಾಗಿದೆ.
ಜೊತೆಗೆ ಸುಪ್ರೀಂ ಸೂಚಿಸಿರುವಂತೆಯೇ ವಾಯುಮಾಲಿನ್ಯ, ಶಬ್ದಮಾಲಿನ್ಯ ಉಂಟು ಮಾಡದ ಪಟಾಕಿಗಳನ್ನು ಮಾತ್ರ ಸಿಡಿಸಲು ಅನುಮತಿ ನೀಡಬೇಕು. ಸೂಕ್ಷ್ಮ ಪ್ರದೇಶ, ಆಸ್ಪತ್ರೆ, ದೇವಸ್ಥಾನ ಮತ್ತಿತರ ನಿರ್ಬಂಧಿತ ಸ್ಥಳಗಳಲ್ಲಿ ಪಟಾಕಿ ಸಿಡಿಸಬಾರದು. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ನಿಗಾ ವಹಿಸಬೇಕು ಎಂಬಿತ್ಯಾದಿ ಅಂಶಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos