ಶಿವಮೊಗ್ಗ: ಸಿಲಿಂಡರ್ ತುಂಬಿದ ಲಾರಿ ಸ್ಫೋಟಗೊಂಡ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ ಮಧ್ಯೆ ಇರುವ ಮುಂಡಿಗೆಹಳ್ಳ ಬಳಿ ಈ ಘಟನೆ ನಡೆದಿದೆ. ಸಿಲಿಂಡರ್ ತುಂಬಿದ್ದ ಲಾರಿ ತಾಳಗುಪ್ಪದಲ್ಲಿ ಪಲ್ಟಿಯಾಗಿದೆ. ಈ ವೇಳೆ ಲಾರಿಯಲ್ಲಿದ್ದ ಸಿಲಿಂಡರ್ ಗಳು ಸ್ಫೋಟಗೊಂಡ ಪರಿಣಾಮ ದಿಢೀರ್ ಬೆಂಕಿ ಹೊತ್ತಿಗೊಂಡಿದೆ. ಪರಿಣಾಮ ಲಾರಿ ಚಾಲಕ ಸಜೀವವಾಗಿ ದಹನವಾಗಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದ್ದು, ಮೃತ ಚಾಲಕನನ್ನು ಕೃಷ್ಣಮೂರ್ತಿ ಗುರುತಿಸಿದ್ದಾರೆ. ಕೃಷ್ಣಮೂರ್ತಿ ಭದ್ರಾವತಿಯ ಮಾವಿನಕಟ್ಟೆ ಗ್ರಾಮದವರು ಎನ್ನಲಾಗಿದ್ದು, ಬೆಳಗ್ಗೆ ಸುಮಾರು ನಾಲ್ಕೂವರೆ ಗಂಟೆಗೆ ಘಟನೆ ನಡೆದಿದೆ. ಇಂಡೇನ್ ಗ್ಯಾಸ್ ಕಂಪನಿಗೆ ಸೇರಿದ ಲಾರಿ ಇದಾಗಿದ್ದು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಫೋಟದಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.