ರಾಜ್ಯ

ವಿಜಯಪುರ: ಪತ್ನಿ ಅಂತ್ಯ ಸಂಸ್ಕಾರಕ್ಕೆ ಬಂದ ಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ್ರು!

Raghavendra Adiga
ವಿಜಯಪುರ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ನಿಯ ಅಂತ್ಯ ಸಂಸ್ಕಾರಕ್ಕೆಂದು ಆಗಮಿಸಿದ್ದ ಪತಿಯನ್ನು ಸಂಬಂಧಿಕರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ತಾಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ನಡೆದ ಪ್ರಕರಣದಲ್ಲಿ ರಾಜು ತಾಂಬೆ(23) ಹತ್ಯೆಗೀಡಾಗಿದ್ದಾನೆ. ಈತ ತನ್ನ ಪತ್ನಿ ಕಾಜಲ್ ತಾಂಬೆ(20)  ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ವೇಳೆ ಕಾಜಲ್ ಪೋಷಕರು ಹಾಗೂ ಸಂಬಂಧಿಕರಿಂದ ಕೊಲೆಯಾಗಿದ್ದಾನೆ.
ಘಟನೆ ವಿವರ
ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ರಾಜು ಹಾಗೂ ಕಾಜಲ್ ನಡುವೆ ವರ್ಷದ ಕೆಳಗೆ ಸಣ್ಣದಾಗಿ ಪ್ರಾರಂಭವಾಗಿದ್ದ ಜಗಳ ಇತ್ತೀಚೆಗೆ ದೊಡ್ಡ ಕಲಹದ ಸ್ವರೂಪ ತಳೆದಿತ್ತು. ಇಬ್ಬರ ಜಗಳ ಬಿಡಿಸಲು ಹಿರಿಯರು ರಾಜಿ ಸಂಧಾನವನ್ನೂ ನಡೆಸಿದ್ದರು. ಆದರೆ ಸಮಸ್ಯೆ ಬಗೆಹರಿದಿರಲಿಲ್ಲ.
ಭಾನುವಾರ ಸಂಜೆ ಕಾಜಲ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಶವ ಸಂಸ್ಕಾರಕ್ಕಾಗಿ ಅದೇ ದಿನ ಖಿಲಾರಹಟ್ಟಿ ಸ್ಮಶಾನಕ್ಕೆ ತರಲಾಗಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಪತಿಯನ್ನು ಕಂಡು ಕ್ರೋಧಗೊಂಡ ಆಕೆಯ ಪೋಷಕರು ಗಂಡನೇ ಈಕೆಯನ್ನು ಕೊಂದಿದ್ದಾನೆ ಎಂದು ಆಕ್ರೋಶಗೊಂಡು ಆತನನ್ನು ಕೊಲೆ ಮಾಡಿದ್ದಾರೆ.
ಅಂತ್ಯ ಸಂಸ್ಕಾರಕ್ಕೆ ತಂದಿದ್ದ ಕಟ್ಟಿಗೆ, ಕಲ್ಲುಗಳಿಂದಲೇ ರಾಜುವನ್ನು ಜಜ್ಜಿ ಕೊಲ್ಲಲಾಗಿದೆ.ಈ ವೇಳೆ ರಾಜುವನ್ನು ರಕ್ಷಿಸಲು ಮುಂದಾದ ಆತನ ಸೋದರ ಸಂಜಯ್  ಮೇಲೆ ಸಹ ಹಲ್ಲೆಯಾಗಿದೆ.ಹಲ್ಲೆಗೊಳಗಾದ ಸಂಜಯ್ ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೀಗೆ ಸೇರಿದ್ದಾರೆ.
ರಾಜು ಕೊಲೆಯ ನಡುವೇಯೇ ಭಾನುವಾರ ತಡರಾತ್ರಿ ಕಾಜಲ್ ಅಂತ್ಯಸಂಸ್ಕಾರ ತರಾತುರ್ತಿಯಲ್ಲಿ ನಡೆದಿದೆ. ಘಟನೆ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದು ಬಬಲೇಶ್ವರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
SCROLL FOR NEXT