ಚಿಕ್ಕಮಗಳೂರು: ಆಯುಧ ಪೂಜೆ ಹಿಂದೂಗಳಿಗೆ ತುಂಬಾ ಶ್ರೇಷ್ಠವಾದ ಹಬ್ಬ. ಆದರೆ ಇಲ್ಲೊಬ್ಬ ಮುಸ್ಲಿಂ ಯುವಕ ಹಿಂದೂಗಳ ಸಂಪ್ರದಾಯದಂತೆ ತನ್ನ ಬಸ್ಸುಗಳಿಗೆ ಪೂಜೆ ಮಾಡಿ ಸಿಹಿ ಹಂಚಿ ಶುಭ ಹಾರೈಸಿದ್ದಾನೆ.
ಆಯುಧ ಪೂಜೆ ದಿನ ಪ್ರತಿಯೊಬ್ಬರು ತಮ್ಮ ವಾಹನ ಮತ್ತು ಆಯುಧಗಳಿಗೆ ಪೂಜೆ ಮಾಡಿ ನಮಿಸುತ್ತಾರೆ. ಇಂದು ಮುಂಜಾನೆಯಿಂದಲೇ ಪ್ರತಿಯೊಬ್ಬರು ತಮ್ಮ ವಾಹನ ಮತ್ತು ಪ್ರತಿನಿತ್ಯ ಮನೆಯಲ್ಲಿ ಬಳಕೆ ಮಾಡುವಂತಹ ವಸ್ತುಗಳನ್ನು ತೊಳೆದು ವಿಭೂತಿ, ಕುಂಕುಮ ಹಚ್ಚಿ, ಹೂವಿನಿಂದ ಸಿಂಗಾರ ಮಾಡಿ ಪೂಜೆ ಸಲ್ಲಿಸಿ ನಂತರ ಮಂಗಳಾರತಿ ಮಾಡಿ ಬೂದುಗುಂಬಳ ಕಾಯಿ ಒಡೆದು ಆಯುಧ ಪೂಜೆ ಮಾಡುತ್ತಿದ್ದಾರೆ.
ಚಿಕ್ಕಮಗಳೂರಿನ ಎಸ್ಎಂಎಸ್ ಬಸ್ ಮಾಲೀಕನಾದ ಸಿರಾಜ್ ಹಿಂದೂಗಳು ನಾಚುವಂತೆ ಆಯುಧ ಪೂಜೆ ಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಆರು ಬಸ್ಸುಗಳನ್ನು ಶುಚಿ ಮಾಡಿ ಅವುಗಳಿಗೆ ಚೆಂಡೂ ಹೂ, ಬಲೂನ್, ಬಾಳೆ ದಿಂಡು, ಮಾವಿನ ತೋರಣ ಕಟ್ಟಿ ಸಿಂಗಾರ ಮಾಡಿದ್ದಾರೆ.
ಪ್ರತಿಯೊಂದು ಬಸ್ಸಿಗೂ ಕುಂಕುಮ, ವಿಭೂತಿ ಹಚ್ಚಿ ಆರತಿ ಬೆಳಗಿದ್ದಾರೆ. ಆರು ಬಸ್ಸುಗಳನ್ನು ಹೂವಿನಿಂದ ಅಲಂಕಾರ ಮಾಡಿ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಸಹಿ ಹಂಚಿ ಆಯುಧ ಪೂಜೆ ಶುಭಾಶಯ ತಿಳಿಸಿದ್ದಾರೆ.