ಬೆಂಗಳೂರು: ಸ್ನೇಹಿತೆಯನ್ನು ಚುಡಾಯಿಸಿದ್ದಕ್ಕೆ ವಿರೋಧಿಸಿದ ಯುವಕನೊಬ್ಬನನ್ನು ಬಿಯರ್ ಬಾಟಲಿ ಬಳಸಿ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಮತ್ತಿಕೆರೆ ಸಮೀಪದ ಎಲ್ಎನ್ ಕಾಲೋನಿಯಲ್ಲಿ ನಡೆದ ಘಟನೆಯಲ್ಲಿ ಉತ್ತರಾಖಂಡ್ ಮೂಲದ ಜಗದೀಪ್ ಸಿಂಗ್ (21) ಸಾವನ್ನಪ್ಪಿದ ದುರ್ದೈವಿ.
ಮತ್ತಿಕೆರೆ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಜಗದೀಪ್ ಸಿಂಗ್ ಹಾಗೂ ಸುಹಾನ್ ಗುರುವಾರ ರಾತ್ರಿ ಇಬ್ಬರು ಸ್ನೇಹಿತೆಯರ ಜತೆ ಹೋಟೆಲ್ ಒಂದಕ್ಕೆ ಊಟಕ್ಕೆ ತೆರಳಿದ್ದಾರೆ. ಆ ವೇಳೆ ಅಲ್ಲೇ ಇದ್ದ ಸ್ಥಳೀಯ ಯುವಕರು ಮದ್ಯದ ಅಮಲಿನಲ್ಲಿ ಯುವತಿಯರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿ ಮಾತನಾಡಿದ್ದಾರೆ. ಆಗ ಕ್ರೋಧಗೊಂಡ ಜಗದೀಪ್ ಸಿಂಗ್ ಸಭ್ಯತೆಯಿಂದ ವರ್ತಿಸುವಂತೆ ಹೇಳಿದ್ದಾರೆ.
ಆದರೆ ಇದರಿಂದ ಮತ್ತಷ್ಟು ಆಕ್ರೋಶಗೊಂಡ ಸ್ಥಳೀಯ ಯುವಕರು ಜಗದೀಶ್ ಸಿಂಗ್ ಹಾಗೂ ಸುಹಾನ್ ಮೇಲೆ ಬಿಯರ್ ಬಾಟಲಿ ಬಳಸಿ ಹಲ್ಲೆ ನಡೆಸಿದ್ದಾರೆ. ಜಗದೀಪ್ ಸಿಂಗ್ ಕತ್ತನ್ನು ಸೀಳಿದ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿದ್ದ ಜಗದೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುಹಾನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.