ಬೆಂಗಳೂರು: ದಂತ ವೈದ್ಯೆಗೆ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಗಿರಿನಗರ ಠಾಣೆ ಪೇದೆಯೊಬ್ಬರನ್ನು ಬುಧವಾರ ಅಮಾನತು ಮಾಡಲಾಗಿದೆ.
ಗಿರಿನಗರ ಠಾಣೆ ಪೇದೆ ಸುದರ್ಶನ್ ಮಿಸ್ಕಿಯವರನ್ನು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಅಮಾನತುಗೊಳಿಸಿದ್ದಾರೆ.
ತನ್ನೊಂದಿಗೆ ಸಲುಗೆಯಿಂದ ನಡೆದುಕೊಳ್ಳದೆ ಹೋದರೆ ಗುಂಡಿಟ್ಟು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ದಂತ ವೈದ್ಯೆ ಪೇದೆ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಬಗ್ಗೆ ತನಿಖೆ ವಿಚಾರಣೆ ಹಂತದಲ್ಲಿದೆ. ದೂರು ದಾಖಲಾಗಿರುವ ಹಿನ್ನಲೆಯಲ್ಲಿ ಮಿಸ್ಕಿಯವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಚಿಕಿತ್ಸೆಗೆಂದು ಆಗಾಗ ಪೇದೆ ಮಾತನಾಡುತ್ತಿದ್ದರು. ಇದಾದ ಕೆಲ ದಿನಗಳ ಬಳಿಕ ಸುಖಾಸುಮ್ಮನೆ ಕರೆ ಮಾಡಿ, ಕೆಟ್ಟದಾಗಿ ಮಾತನಾಡಲು ಆರಂಭಿಸಿದ್ದರು. ಇದಾದ ಬಳಿಕ ಅವರ ಕರೆ ಸ್ವೀಕರಿಸುವುದನ್ನು ನಿಯಂತ್ರಿಸಿದಾಗ ಬೆದರಿಕೆ ಹಾಕಲು ಆರಂಭಿಸಿದ್ದರು. ಕಿರುಕುಳದಿಂದಾಗಿ ಕ್ಲಿನಿಕ್'ನ್ನೇ ಸ್ಥಳಾಂತರ ಮಾಡಿದ್ದೆ. ಇದಾದ ಬಳಿಕ ಹೊಸ ಕ್ಲಿನಿಕ್'ಗೂ ಬರಲೂ ಆರಂಭಿಸಿದ್ದ. ಆತನೊಂದಿಗೆ ಸಲುಗೆಯಿಂದ ನಡೆದುಕೊಳ್ಳದೇ ಹೋದರೆ ಗುಂಡಿಟ್ಟು ಕೊಲ್ಲುವುದಾಗಿ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದ ಎಂದು ವೈದ್ಯೆ ಹೇಳಿಕೊಂಡಿದ್ದಾರೆ.