ರಾಜ್ಯ

ಕೋಲಾರ: ಐವರು ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ಪ್ರಕಟಿಸಿದ ಜಿಲ್ಲಾ ನ್ಯಾಯಾಧೀಶ!

Nagaraja AB

ಕೋಲಾರ: 15 ವರ್ಷದ ವಿದ್ಯಾರ್ಥಿ ಕೊಲೆ, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ  ಐವರು ಆರೋಪಿಗಳಿಗೆ ಇಲ್ಲಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್  ನ್ಯಾಯಾಧೀಶರು  ಮರಣದಂಡನೆ ಆದೇಶ ಪ್ರಕಟಿಸಿದ್ದಾರೆ.

10 ನೇ ತರಗತಿ ವಿದ್ಯಾರ್ಥಿ ಹತ್ಯೆ ಆರೋಪಿ ಗುತ್ತಿಗೆ ಕಾರ್ಮಿಕ ಸುರೇಶ್ ಕುಮಾರ್ ವಿರುದ್ಧದ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು  ಪ್ರಕರಣ ನಡೆದ 22 ದಿನಗಳೇ ಮರಣ ದಂಡನೆ  ತೀರ್ಪು ಪ್ರಕಟಿಸುವ ಮೂಲಕ ಹೊಸ ದಾಖಲೆ  ಸೃಷ್ಟಿಸಿದ್ದಾರೆ.

ಆಗಸ್ಟ್ 1 ರಂದು ಸಂಜೆ 5-30 ರ ಸುಮಾರಿನಲ್ಲಿ ಮಾಲೂರಿನ ರೈಲ್ವೆ ಸೇತುವೆ ಕೆಳಗಡೆ ವಿದ್ಯಾರ್ಥಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಆರೋಪಿ ಸುರೇಶ್ ಕುಮಾರ್ ನನ್ನು  ಎಸ್ಪಿ ರೋಹಿಣಿ ಕಟೋಚ್ ಸೆಪೆಟ್ ನೇತೃತ್ವದಲ್ಲಿನ ಮಾಲೂರು ಪೊಲೀಸರ ತಂಡ ಆಗಸ್ಟ್ 3 ರಂದು ಬಂಧಿಸಿದ್ದರು.

ನಂತರ ಆಗಸ್ಟ್ 23 ರಂದು ಆರೋಪಿ ವಿರುದ್ಧ ಪೊಲೀಸರು 46  ಸಾಕ್ಷ್ಯಧಾರಗಳೊಂದಿಗೆ  207 ಪುಟಗಳ  ಚಾರ್ಜ್ ಶೀಟ್ ದಾಖಲಿಸಿದ್ದರು. ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ. ಎಸ್. ರೇಖಾ ಆರೋಪಿಗೆ ಕಠಿಣ ಶಿಕ್ಷೆಯ ಆದೇಶ ಪ್ರಕಟಿಸಿದರು.

 ಮತ್ತೊಂದು  ಪ್ರಕರಣದಲ್ಲಿ  ಮೇ 2014ರಲ್ಲಿ  ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ  ನಾಲ್ವರು ಆರೋಪಿಗಳಿಗೆ  ಮರಣದಂಡನೆ ಶಿಕ್ಷೆ ವಿಧಿಸಿ ರೇಖಾ ತೀರ್ಪು ನೀಡಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ  ಕೋಲಾರ ಎಸ್ಪಿ ಸೆಪೆಟ್,   ಸಂತ್ರಸ್ತರ ಕುಟುಂಬಗಳಿಗೆ  ನ್ಯಾಯ ದೊರಕಿಸಿದ ತೃಪ್ತಿ ಇರುವುದಾಗಿ ತಿಳಿಸಿದರು.
SCROLL FOR NEXT