ರಾಜ್ಯ

ಬೆಂಗಳೂರು; ಭದ್ರತಾ ಸಿಬ್ಬಂದಿಗಳ ಹತ್ಯೆ, ಶಂಕಿತ ನಾಪತ್ತೆ

Sumana Upadhyaya

ಬೆಂಗಳೂರು:  ನಗರದ ಹುಳಿಮಾವು ವ್ಯಾಪ್ತಿಯ ತೇಜಸ್ವಿನಿ ನಗರದ ಅಭಿವೃದ್ಧಿ ಹಂತದಲ್ಲಿರುವ ಖಾಸಗಿ ಲೇ ಔಟ್ ನಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಕೊಲೆಯಾದ ಘಟನೆ ನಡೆದಿದೆ. ಘಟನೆ ಬಳಿಕ ತಲೆಮರೆಸಿಕೊಂಡಿರುವ ಮೂರನೇ ಭದ್ರತಾ ಸಿಬ್ಬಂದಿಯ ಪಾತ್ರ ಈ ಕೊಲೆಯಲ್ಲಿ ಇರಬಹುದು ಎಂದು ನಂಬಲಾಗಿದೆ. ಕೊಲೆಗೆ ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ.

ಮೃತ ಭದ್ರತಾ ಸಿಬ್ಬಂದಿಯನ್ನು 25 ವರ್ಷದ ಸೈದುಲ್ಲಾ ಮತ್ತು 26 ವರ್ಷದ ಬಿಕ್ರಮ್ ಎಂದು ಗುರುತಿಸಲಾಗಿದೆ. ಇಬ್ಬರೂ ಅಸ್ಸಾಂ ಮೂಲದವರಾಗಿದ್ದು ಕಳೆದ ಎರಡು ಮೂರು ತಿಂಗಳಿನಿಂದ ಖಾಸಗಿ ಲೇ ಔಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶಂಕಿತ ಅಜಿತ್ ಬ್ರಹ್ಮ ಮೊನ್ನೆ ಮಂಗಳವಾರವಷ್ಟೇ ಕೆಲಸಕ್ಕೆ ಸೇರಿದ್ದ.

ನಿನ್ನೆ ಬೆಳಗ್ಗೆ ಸುಮಾರು 7 ಗಂಟೆಗೆ ಕಾರ್ಮಿಕರು ಲೇ ಔಟ್ ಗೆ ಕೆಲಸಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಭದ್ರತಾ ಸಿಬ್ಬಂದಿ ಕೊಠಡಿಯಲ್ಲಿ ಇಬ್ಬರ ಶವ ಪತ್ತೆಯಾಯಿತು. ನಿವೇಶನದ ಮ್ಯಾನೇಜರ್ ಗೆ ವಿಷಯ ತಲುಪಿಸಿದರು. ಅವರು ಕೂಡಲೇ ಪೊಲೀಸರಿಗೆ ದೂರು ನೀಡಿದರು. ಕಬ್ಬಿಣದ ಸಲಾಕೆಯಿಂದ ಹೊಡೆದು ಇಬ್ಬರನ್ನೂ ಹತ್ಯೆ ಮಾಡಲಾಗಿದ್ದು ಅದನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.

ಮೂವರು ಭದ್ರತಾ ಸಿಬ್ಬಂದಿ ಕೂಡ ಕಳೆದ ಮಂಗಳವಾರ ರಾತ್ರಿ ಪಾಳಿಯ ಡ್ಯೂಟಿಯಲ್ಲಿದ್ದರು. ಅಜಿತ್ ತಪ್ಪಿಸಿಕೊಂಡಿದ್ದಾನೆ. ಆತನನ್ನು ಪತ್ತೆಹಚ್ಚಲು ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT