ಹುಬ್ಬಳ್ಳಿ: ಕಳೆದ ಕೆಲ ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತಾಪ ತಾರಕಕ್ಕೇರಿದ್ದು 40 ಡಿಗ್ರಿ ಸೆಲ್ಸಿಯಸ್ ಗಿಂತ ಅಧಿಕವಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಸಲಹೆಗಾರರ ಪ್ರಕಾರ, ಮುಂದಿನ ದಿನಗಳಲ್ಲಿ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಭಾರತೀಯ ಹವಾಮಾನ ಇಲಾಖೆ ಹೇಳುವ ಪ್ರಕಾರ ಏಪ್ರಿಲ್ 30ರ ನಂತರ ತಾಪಮಾನ ಕಡಿಮೆಯಾಗಲಿದೆ.
ಕಳೆದ ಗುರುವಾರ ಗದಗ ಜಿಲ್ಲೆಯಲ್ಲಿ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದ್ದು ಕಳೆದ 78 ವರ್ಷಗಳಲ್ಲಿ ದಾಖಲೆಯ ಉಷ್ಣಾಂಶವಾಗಿದೆ. 1941ರಲ್ಲಿ ಜಿಲ್ಲೆಯಲ್ಲಿ ಇದೇ ಸಮಯದಲ್ಲಿ ಇಷ್ಟೊಂದು ತಾಪಮಾನ ದಾಖಲಾಗಿತ್ತು.
ಸರಾಸರಿಗಿಂತ ಗರಿಷ್ಠ ಮಟ್ಟಕ್ಕೆ ತಾಪಮಾನ ತಲುಪಿದಾಗ ಉಷ್ಣ ಗಾಳಿ ಬೀಸುತ್ತದೆ. ನಿನ್ನೆ ಕಲಬುರಗಿಯಲ್ಲಿ 43.3 ಡಿಗ್ರಿ ಸೆಲ್ಸಿಯಸ್, ರಾಯಚೂರಿನಲ್ಲಿ 42 ಡಿಗ್ರಿ ಸೆಲ್ಸಿಯಸ್, ಹಾವೇರಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುಂದಿನ ಮೂರು ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಗರಿಷ್ಠ ಉಷ್ಣಾಂಶ 3-4 ಡಿಗ್ರಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಬೆಳಗಾವಿ, ವಿಜಯಪುರ, ಬೀದರ್, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಯಾದಗಿರಿ, ಬಳ್ಳಾರಿ, ಹಾವೇರಿ, ಕೊಪ್ಪಳ ಮತ್ತು ರಾಯಚೂರಿನಲ್ಲಿ ಮುಂದಿನ ಮೂರು ದಿನಗಳಲ್ಲಿ ಗರಿಷ್ಠ ಉಷ್ಣಾಂಶ ಹೆಚ್ಚಾಗಲಿದೆ.