ರಾಜ್ಯ

ಒಳಚರಂಡಿ ಸ್ವಚ್ಛಗೊಳಿಸಲು ಇಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವು

Lingaraj Badiger
ಬೆಂಗಳೂರು: ಒಳಚರಂಡಿ ಸ್ವಚ್ಛಗೊಳಿಸಲು ಗುಂಡಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಕಾರ್ಮಿಕರು ಕೆ.ಜಿ.ಹಳ್ಳಿಯ ಟ್ಯಾನರಿ ರಸ್ತೆ ಹಾಗೂ ಮೋದಿ ರಸ್ತೆಯ ನಿವಾಸಿಗಳಾದ ಚೋಟು (40) ಹಾಗೂ ಅಬ್ದುಲ್ ಗಫೂರ್ (45) ಎಂದು ಗುರುತಿಸಲಾಗಿದೆ.
ಟ್ಯಾನರಿ ರಸ್ತೆಯ ಬಿಸ್ಮಿಲ್ಲಾ ಟೀ ಪಾಯಿಂಟ್ ಬಳಿ ಇರುವ ಒಳಚರಂಡಿ, ಕಸಕಡ್ಡಿಗಳಿಂದ  ಕಟ್ಟಿಕೊಂಡಿತ್ತು. ಇದರಿಂದ ರಸ್ತೆಗೆ ನೀರು ಹರಿದಿದ್ದರಿಂದ ಸ್ಥಳೀಯ ಟೀ ಅಂಗಡಿ  ಮಾಲೀಕ ಕಾರ್ಮಿಕರನ್ನು ಬರುವಂತೆ ಹೇಳಿ ಕಳುಹಿಸಿದ್ದರು.
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಒಳಚರಂಡಿಯನ್ನು ಸ್ವಚ್ಛಗೊಳಿಸಲು ಚೋಟು ಮತ್ತು ಗಫೂರ್ ಆಗಮಿಸಿದ್ದಾರೆ. ಮೊದಲು ಚೋಟು ಗುಂಡಿಯೊಳಗೆ ಇಳಿದಿದ್ದಾನೆ. ಆದರೆ ಸುಮಾರು 10 ಅಡಿ ಆಳವಿದ್ದ ಗುಂಡಿಯಲ್ಲಿ ಆಮ್ಲಜನಕದ ಕೊರತೆ ಉಂಟಾದುದರಿಂದ ಚೋಟು ಅಲ್ಲಿ ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿದ್ದುದನ್ನು ಕಂಡ ಗಫೂರ್ ಆತನನ್ನು ರಕ್ಷಿಸಲು ಕೆಳಗಿಳಿದಿದ್ದಾರೆ. ಆದರೆ ಇಬ್ಬರೂ ಉಸಿರಾಡಲಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ಪೊಲೀಸರು ಮೃತದೇಹಗಳನ್ನು ಮೇಲಕ್ಕೆ ಎತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟೀ ಅಂಗಡಿ ಮಾಲೀಕ ಈ ಇಬ್ಬರು ಕಾರ್ಮಿಕರನ್ನು ಕರೆಸಿ ಕೆಲಸ ಮಾಡುವಂತೆ ಸೂಚಿಸಿದ್ದರು. ಅದರಂತೆ ಚೋಟು ಮತ್ತು ಗಫೂರ್ ಗುಂಡಿಗೆ ಇಳಿದಾಗ ಆಮ್ಲಜನಕದ ಕೊರತೆಯಿಂದ ಉಸಿರು ಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿರುವ ಕಾಡುಗೊಂಡನಹಳ್ಳಿ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಮ್ಯಾನ್ ಹೋಲ್ ಮತ್ತು ಒಳಚರಂಡಿಗಳ ಸ್ವಚ್ಛತೆಗೆ ಮನುಷ್ಯರನ್ನು ಇಳಿಸದಂತೆ ಸುಪ್ರೀಂಕೋರ್ಟ್‌ನ ಸ್ಪಷ್ಟ ನಿರ್ದೇಶನವಿದ್ದರೂ ಮತ್ತೆ ಮತ್ತೆ ಕಾರ್ಮಿಕರು ಮ್ಯಾನ್ ಹೋಲ್‌ಗಳಿಗೆ ಇಳಿದು ಸಾವನ್ನಪ್ಪುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ.
SCROLL FOR NEXT