ರಾಮನಗರ: ರೌಡಿಶೀಟರ್ ಸುನೀಲ್ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟಿ ಮತ್ತು ಆಕೆಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜನವರಿ 29ರಂದು ರೌಡಿಶೀಟರ್ ಸುನೀಲ್ ನನ್ನು ಚನ್ನಪಟ್ಟಣದ ರಾಂಪುರದ ತೋಟದ ಮನೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಇದೀಗ ನಟಿ ಪ್ರಿಯಾಂಕ ಮತ್ತು ಅವರ ತಾಯಿ ನಾಗಮ್ಮರನ್ನು ಬಂಧಿಸಿದ್ದಾರೆ.
ಕೊಲೆ ಸಂಬಂಧ ಪೊಲೀಸರು ಸುನೀಲ್ ನನ್ನು ಕೊಲೆ ಮಾಡಿದ್ದ ಮನು ಅಲಿಯಾಸ್ ಮಾದೇಗೌಡ, ಶಿವರಾಜ್ ಉರುಫ್ ಕುದುರೆ ಎಂಬುವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ ನಟಿ ಪ್ರಿಯಾಂಕ ಮತ್ತು ನಾಗಮ್ಮರ ಹೆಸರು ಕೇಳಿಬಂದಿತ್ತು.
ಮೊದಲಿಗೆ ಸುನೀಲ್ ಪ್ರಿಯಾಂಕಾ ಅವರ ಕಾರು ಚಾಲಕನಾಗಿದ್ದ. ಅಲ್ಲದೆ ಸುನೀಲ್ ಪ್ರಿಯಾಂಕಳ ಅತ್ತೆ ಮಗನಾಗಿದ್ದ. ಕೊಲೆ ಪ್ರಕರಣದ ಆರೋಪಿಯಾಗಿದ್ದರಿಂದ ಪ್ರಿಯಾಂಕ ಸುನೀಲ್ ನನ್ನು ಕೆಲಸದಿಂದ ಕಿತ್ತು ಹಾಕಿದ್ದಳು. ನಂತರ ಸುನೀಲ್ ಆಕೆಯನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇದರಿಂದ ಬೇಸರಗೊಂಡಿ ಪ್ರಿಯಾಂಕ ತನ್ನ ಸಂಬಂಧಿಕರಿಗೆ ಹೇಳಿ ಕೊಲೆ ಮಾಡಿಸಿದ್ದಳು ಎಂದು ತಿಳಿದುಬಂದಿದೆ.