ಬೆಂಗಳೂರು: ಕೆಫೆ ಕಾಫಿ ಡೇ ಸಂಸ್ಥೆಯ ಮಾಲೀಕ ವಿಜಿ ಸಿದ್ಧಾರ್ಥ್ ಅವರ ಅಕಾಲಿಕ ಸಾವು ಇಡೀ ದೇಶದ ಉದ್ಯಮ ವಲಯದ ಜಂಗಾಬಲವನ್ನೇ ನಡುಗಿಸಿದ್ದು, ಇದೀಗ ವಿಜಿ ಸಿದ್ಧಾರ್ಥ್ ಸಾವಿಗೆ ಹೊಸ ಟ್ವಿಸ್ಟ್ ವೊಂದು ದೊರೆತಿದೆ.
ಹೌದು.. ಮಂಗಳೂರಿನ ನೇತ್ರಾವತಿ ನದಿಯಲ್ಲಿ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾದ ಬೆನ್ನಲ್ಲೇ ಅವರ ಸಾವಿಗೆ ರೋಚಕ ಟ್ವಿಸ್ಟ್ ದೊರೆಯುತ್ತಿದ್ದು, ಸಿದ್ಧಾರ್ಥ್ ಅವರ ಸಾವಿಗೆ ಮುಂಬೈ ಮೂಲದ ಫೈನಾನ್ಸ್ ಕಂಪನಿಯ ಕಿರುಕುಳವೇ ಕಾರಣ ಎನ್ನಲಾಗುತ್ತಿದೆ. ಕಾರಣಾಂತರಗಳಿಂದ ಈ ಫೈನಾನ್ಸ್ ಸಂಸ್ಛೆಯಿಂದ ಸಿದ್ಧಾರ್ಥ್ ಸಾಲ ಪಡೆದಿದ್ದು, ಇದನ್ನು ತೀರಿಸಲಾಗದೇ ಮತ್ತು ಆ ಸಂಸ್ಥೆಯ ಎಜೆಂಟರುಗಳ ಕಿರುಕುಳದಿಂದ ಬೇಸತ್ತ ಸಿದ್ಧಾರ್ಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ವರದಿಯಲ್ಲಿರುವಂತೆ ಸಿದ್ಧಾರ್ಥ್ ಮುಂಬೈ ಮೂಲದ ಫೈನಾನ್ಸ್ ಸಂಸ್ಥೆಯಿಂದ ಸುಮಾರು 7500 ಕೋಟಿ ರೂಗಳನ್ನು ತಿಂಗಳ ಬಡ್ಡಿಆಧಾರದ ಮೇಲೆ ಸಾಲ ಪಡೆದಿದ್ದರು. ಈ ಸಾಲ ವಸೂಲಾತಿಗಾಗಿ ಸಿದ್ಧಾರ್ಥ್ ಅವರನ್ನು ಆ ಫೈನಾನ್ಸ್ ಸಂಸ್ಥೆ ಪೀಡಿಸುತ್ತಿತ್ತು. ಇದರಿಂದ ಬೇಸತ್ತ ಸಿದ್ಧಾರ್ಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಿದ್ಧಾರ್ಥ್ ತಾವು ತಮ್ಮ ಸಂಸ್ಛೆಯ ಷೇರುಗಳನ್ನು ಮಾರಾಟ ಮಾಡಿ ಸಾಲ ತೀರಿಸುವುದಾಗಿ ಎಷ್ಟೇ ಹೇಳಿದರೂ ಕೇಳದ ಆ ಫೈನಾನ್ಸ್ ಸಂಸ್ಥೆ ತನ್ನ ಸಾಲ ವಸೂಲಾತಿ ಎಜೆಂಟ್ ಗಳನ್ನು ಸಿದ್ಧಾರ್ಥ್ ಅವರ ಹಿಂದೆ ಬಿಟ್ಟು ಅವರ ಮೂಲಕ ಒತ್ತಡ ಹೇರುತ್ತಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಈ ಹಿಂದೆ ಸಿದ್ಧಾರ್ಥ್ ಐಟಿ ದಾಳಿಯ ಹೊರತಾಗಿಯೂ ತಮ್ಮ ಮೈಡ್ ಟ್ರೀ ಸಂಸ್ಥೆಯ ಷೇರುಗಳ ಪೈಕಿ ಬರೊಬ್ಬರಿ ಶೇ.20ರಷ್ಚು ಷೇರುಗಳನ್ನು ಮಾರಾಟ ಮಾಡಿದ್ದರು. ಇದರಿಂದ ಬಂದ ಸುಮಾರು 3 ಸಾವಿರ ಕೋಟಿ ರೂ.ಗಳನ್ನು ಫೈನಾನ್ಸ್ ಸಂಸ್ಛೆಗೆ ನೀಡಿದ್ದರು ಎನ್ನಲಾಗಿದೆ.
ಆದರೂ ಇಷ್ಟಕ್ಕೆ ಸುಮ್ಮನಾಗದ ಆ ಫೈನಾನ್ಸ್ ಸಂಸ್ಥೆ ಬಾಕಿ ಉಳಿದಿರುವ 4500 ಸಾವಿರ ಕೋಟಿ ರೂಗಾಗಿ ಮತ್ತೆ ಸಿದ್ಧಾರ್ಥ್ ಅವರನ್ನು ಕಾಡಿತ್ತು. ಈ ವೇಳೆ ಸಿದ್ಧಾರ್ಥ್ ಬಾಕಿ ಸಾಲ ಮರುಪಾವತಿಗೆ 6 ತಿಂಗಳ ಕಾಲಾವಕಾಶ ಕೇಳಿದ್ದರಂತೆ. ಆದರೂ ಫೈನಾನ್ಸ್ ಕಂಪನಿ ತನ್ನ ಎಜೆಂಟರುಗಳ ಮೂಲಕ ಸಿದ್ಧಾರ್ಥ್ ಮೇಲೆ ಒತ್ತಡ ಹೇರಿತ್ತು. ಹೀಗಾಗಿ ಸಿದ್ಧಾರ್ಥ್ ತಾವೇ ಕಟ್ಟಿ ಬೆಳೆಸಿದ್ದ ತಮ್ಮ ಕಾಫಿ ಡೇ ಸಂಸ್ಛೆಯ ಷೇರುಗಳನ್ನು ಕೋಕಾಕೋಲಾ ಸಂಸ್ಥೆಗೆ ಮಾರಾಟ ಮಾಡಲು ಮುಂದಾಗಿದ್ದರು. ಈ ವೇಳೆ ಕಾಫಿ ಡೇ ಸಂಸ್ಛೆಯ ಮೇಲೆ ಕಣ್ಣು ಹಾಕಿದ ಆ ಫೈನಾನ್ಸ್ ಸಂಸ್ಥೆ ಕೋಕಾ ಕೋಲಾ ಕಂಪನಿಗೆ ಷೇರುಗಳನ್ನು ಮಾರಾಟ ಮಾಡದಂತೆ ಸಿದ್ಧಾರ್ಥ್ ಅವರ ಮೇಲೆ ಒತ್ತಡ ಹೇರಿತ್ತು. ಅಲ್ಲದೆ ಕಡಿಮೆ ಮೊತ್ತಕೆ ತಾನೇ ಆ ಷೇರುಗಳನ್ನು ಖರೀದಿ ಮಾಡಿ ಇಡೀ ಕಾಫಿ ಡೇ ಸಂಸ್ಥೆಯನ್ನೇ ತನ್ನ ಕೈ ವಶ ಮಾಡಿಕೊಳ್ಳಲು ಹೊಂಚು ಹಾಕಿತ್ತು ಎನ್ನಲಾಗಿದೆ.
ಇದಕ್ಕಾಗಿ ಸಿದ್ಧಾರ್ಥ್ ಮೇಲೆ ಒತ್ತಡ ಹಾಕಿ, ಷೇರು ಖರೀದಿ ಮಾಡಲು ಮುಂದಾಗಿತ್ತು. ಇದೇ ಕಾರಣಕ್ಕೆ ಸಿದ್ಧಾರ್ಥ್ ಅತೀವ ಒತ್ತಡದಿಂದ ಆತ್ಮಹತ್ಯೆಗೆ ಮುಂದಾಗಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos