ರಾಜ್ಯ

ಫೇಸ್ ಬುಕ್ ಖಾತೆ ಮೂಲಕ ಮಹಿಳೆಯರನ್ನು ಮದುವೆಯಾಗುವುದಾಗಿ ವಂಚಿಸುತ್ತಿದ್ದವನ ಬಂಧನ

Srinivas Rao BV
ಬೆಂಗಳೂರು: ಫೇಸ್ ಬುಕ್ ಖಾತೆ ತೆರೆದು ನಕಲಿ ಹೆಸರಿಲ್ಲಿ ಹೆಂಗಸರನ್ನು ಮರಳು ಮಾಡಿ ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 27 ರಂದು ವೈಟ್ ಫೀಲ್ಡ್ ಪೊಲೀಸ್ ಠಾಣಾ ಸರಹದ್ದಿನ ನೆಲ್ಲೂರಳ್ಳಿ ರಸ್ತೆಯ ದಿವ್ಯಶ್ರೀ ಪ್ಲಾಜಾ ಬಳಿ ವಂಚಕ ಪ್ರಮೋದ್ ಮಂಜುನಾಥ್ ಹೆಗಡೆ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಉತ್ತರ ಕನ್ನಡ ಜಿಲ್ಲೆಯ ಕಾಂಚಿಕೈ ಗ್ರಾಮದವರು ಎಂದು ತಿಳಿದು ಬಂದಿದೆ.
ಬಂಧಿತನಿಂದ ಕಾರು,ಲ್ಯಾಪ್ ಟಾಪ್, ಮೊಬೈಲ್ ಹಾಗೂ ಸುಮಾರು 40 ಗ್ರಾಂ ತೂಕದ ಚಿನ್ನಾಭರಣಗಳನ್ನು ಪಶಪಡಿಸಿಕೊಳ್ಳಲಾಗಿದೆ.ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಸುಮಾರು 6.2 ಲಕ್ಷಗಳು ಎಂದು ಅಂದಾಜಿಸಲಾಗಿದೆ. ಮಹಿಳೆಯರ ಜೊತೆ ಭಾವನಾತ್ಮಕವಾಗಿ ಮಾತನಾಡಿ ಅವರ ಬಳಿ ತನ್ನ ಕಷ್ಟಗಳನ್ನು ಹೇಳಿಕೊಂಡು ಮನವೊಲಿಸಿ ಅವರಿಂದ ಹಂತ ಹಂತವಾಗಿ ಸುಮಾರು 11 ಲಕ್ಷಕ್ಕಿಂತ ಹೆಚ್ಚು ಹಣವನ್ನು ಪಡೆದೆದ್ದಾನೆ. 
ಇದೇ ರೀತಿ ಪ್ರಮೋದ್ ಮಂಜುನಾಥ್ ಹೆಗಡೆ ಯಾರಿಗಾದರೂ ವಂಚಿಸಿದರೆ ಅಂತಹವರು ನಗರ ಪೊಲೀಸ್ ಆಯುಕ್ತರ ಕಚೇರಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಲು ಪೊಲೀಸರು ಕೋರಿದ್ದಾರೆ. 
ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ವ್ಯಕ್ತಿಗಳ ನೈಜತೆ ತಿಳಿಯದೆ ತಮ್ಮ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಬಾರದೆಂದು ಹಾಗೂ ಅವರ ಖಾತೆಗೆ ಹಣ ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಬಾರದೆಂದು ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.
ಜಂಟಿ ಪೊಲೀಸ್ ಆಯುಕ್ತರು ಸಂದೀಪ್ ಪಾಟೀಲ್ ಹಾಗೂ ಅಪರಾಧ ಜಂಟಿ ಪೊಲೀಸ್ ಆಯುಕ್ತರು,ಕೆ.ಪಿ ರವಿಕುಮಾರ್ ಇವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಮಾಡಿದ್ದಾರೆ.
SCROLL FOR NEXT