ಧಾರವಾಡ: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ.ನಾಯಿಯು ತನ್ನ ಗೆಳೆಯ ಸಮಾನನಾದ ಮಾಲೀಕನ ಮಾತನ್ನು ಕೇಳುವ, ಆಜ್ಞೆಯನ್ನು ಪಾಲಿಸುವ ನಿಯತ್ತಿನ ಪ್ರಾಣಿ. ಉತ್ತರ ಕರ್ನಾಟಕದಲ್ಲಿನ ಭೀಕರ ಪ್ರವಾಹ ಪರಿಸ್ಥಿತಿಯಲ್ಲೂ ಮಾಲೀಕ ಹಾಗೂ ನಾಯಿಯ ನಡುವಿನ ಕುಚುಕು ಗಮನ ಸೆಳೆದಿದೆ.
ಪ್ರವಾಹದಲ್ಲಿ ಸಿಲುಕಿದ 70 ವರ್ಷದ ವಯೋವೃದ್ಧರೊಬ್ಬರನ್ನು ರಕ್ಷಣಾ ಸಿಬ್ಬಂದಿಗಳು ಬೋಟುಗಳ ಮೂಲಕ ರಕ್ಷಿಸಿದ್ದಾರೆ. ಸದ್ಯ ಬದುಕಿತು ಬಡಜೀವ ಎಂದುಕೊಂಡು ಪ್ರವಾಹದ ನೀರಿನಿಂದ ಹೊರ ಬಂದ ಈ ವಯೋವೃದ್ದರು, ತನ್ನನ್ನೇ ನಂಬಿರುವ ನಾಯಿಗಳನ್ನು ರಕ್ಷಿಸುವಂತೆ ರಕ್ಷಣಾ ಸಿಬ್ಬಂದಿಗಳ ಬಳಿ ಮೊರೆ ಇಟ್ಟಿದ್ದಾರೆ.
ಇವರ ಪ್ರೀತಿ ಕಂಡು ಬೆರಗಾದ ರಕ್ಷಣಾ ಸಿಬ್ಬಂದಿಗಳು ಕೂಡಲೇ ಕಾರ್ಯಾಚರಣೆ ನಡೆಸಿ ಅವರ ನಾಯಿಗಳನ್ನು ಕೂಡ ಸುರಕ್ಷಿತವಾಗಿ ರಕ್ಷಿಸಿ, ನೀರಿನಿಂದ ಹೊರಗೆ ತಂದಿದ್ದಾರೆ.
ನವಲಗುಂದ ತಾಲೂಕಿನ ಇಂಗಲಾಳ್ಳಿ ಬಳಿ ಹೀಗೆ ಪ್ರವಾಹದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ ವಯೋವೃದ್ಧ ಹನುಮಂತಪ್ಪ ನಾಲೊಡು ಹಾಗೂ ಆತನ ಎರಡು ಶ್ವಾನಗಳನ್ನು ರಕ್ಷಿಸಲಾಗಿದೆ. ಅವರೊಂದಿಗೆ ಇತರ 9 ಮಂದಿ ಕಟ್ಟಡ ಕಾರ್ಮಿಕರನ್ನು ಕೂಡಾ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮುದೊಳದಲ್ಲಿ 97 ವರ್ಷದ ಮಹಿಳೆ ಸೇರಿದಂತೆ 250 ಮಂದಿಯನ್ನು ಭಾರತೀಯ ಸೇನೆ ರಕ್ಷಿಸಿದೆ.
ಬಿನ್ನಿಹಳ್ಳ ಸ್ಟ್ರೀಮ್ ಬಳಿ ಸೇತುವೆ ನಿರ್ಮಾಣವಾಗುತ್ತಿದ್ದು, ಅಲ್ಲಿ ವಾಚ್ ಮ್ಯಾನ್ ಆಗಿ ಹನುಮಂತಪ್ಪ ಕೆಲಸ ಮಾಡುತ್ತಾರೆ. ಬುಧವಾರದಿಂದ ಈ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ನಿನ್ನೆ ಕಾರ್ಮಿಕರು ಸುರಕ್ಷಿತವಾಗಿ ಬರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿ ಕೆಲಸ ಮಾಡುವ ಬಹುತೇಕರರು ಒಡಿಶಾದಿಂದ ಬಂದಿದ್ದು, ಅವರು ತಮ್ಮ ಊರಿಗೆ ಹೋಗುವ ಸಾಧ್ಯತೆ ಇದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಹನುಮಂತಪ್ಪ , ಇಂಗಲಾಳ್ಳಿಯ ತಮ್ಮ ಮನೆಯಲ್ಲಿ ಈ ಎರಡು ನಾಯಿಗಳನ್ನು ಬೆಳೆಸಿದ್ದು, ಪ್ರವಾಹದಿಂದಾಗಿ ಅವುಗಳನ್ನು ಕಳೆದುಕೊಂಡುಬಿಡುತ್ತೀನಿ ಭಯವಿತ್ತು. ಜೆಸಿಬಿಯೊಂದಿಗೆ ರಕ್ಷಣಾ ಸಿಬ್ಬಂದಿಗಳು ನಾಯಿಗಳೊಂದಿಗೆ ತಮ್ಮನ್ನು ರಕ್ಷಿಸಿದ್ದಾಗಿ ತಿಳಿಸಿದರು.