ರಾಜ್ಯ

ರಾಜ್ಯ ಪ್ರವಾಹ: ಮೃತರ ಸಂಖ್ಯೆ 48ಕ್ಕೆ ಏರಿಕೆ, 12 ಕಣ್ಮರೆ: ದಕ್ಷಿಣ, ಕರಾವಳಿ ಭಾಗದಲ್ಲಿ ಭಾರಿ ಮಳೆ ಮುನ್ಸೂಚನೆ

Nagaraja AB

ಬೆಂಗಳೂರು:  ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 60 ವರ್ಷಗಳಲ್ಲೇ ಅಧಿಕ ಪ್ರಮಾಣದಲ್ಲಿ ಮಳೆಯಾಗಿದ್ದು, ವಿವಿಧೆಡೆ ಉಂಟಾದ ನೆರೆಯಿಂದಾಗಿ ಮೃತರ ಸಂಖ್ಯೆ 48 ಕ್ಕೆ ಏರಿಕೆ ಆಗಿದೆ. 12 ಮಂದಿ ಕಣ್ಮರೆಯಾಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಬೆಳಗಾವಿಯಲ್ಲಿ ಅತಿ ಹೆಚ್ಚು 13 ಮಂದಿ ಮೃತಪಟ್ಟಿದ್ದಾರೆ, ನಾಲ್ವರು ನಾಪತ್ತೆಯಾಗಿದ್ದಾರೆ. ಸುಮಾರು 4 ಲಕ್ಷ 08 ಸಾವಿರದ 322 ಜನರನ್ನು ರಕ್ಷಿಸಲಾಗಿದ್ದು, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. 

1 ಸಾವಿರದ 224ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 3 ಲಕ್ಷದ 93 ಸಾವಿರದ 956 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಪ್ರವಾಹದಿಂದಾಗಿ 767 ಜಾನುವಾರಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. 

ದಕ್ಷಿಣ ಒಳನಾಡಿನ  ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಕರಾವಳಿ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಕರ್ನಾಟಕ, ಕೊಂಕಣ, ಮತ್ತು ಗೋವಾ ಭಾಗಗಳಲ್ಲಿ ಆಗಸ್ಟ್ 15 ರಿಂದ ಮಳೆ ಪ್ರಮಾಣ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

SCROLL FOR NEXT