ರಾಜ್ಯ

ಶೀಘ್ರದಲ್ಲೇ ಎಂಎಂಲ್ ಹಿಲ್ಸ್ ವನ್ಯಜೀವಿ ಅಭಯಾರಣ್ಯಕ್ಕೆ ಹುಲಿ ಸಂರಕ್ಷಿತಾರಣ್ಯ ಮಾನ್ಯತೆ 

Nagaraja AB

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಮಲೆ ಮಹಾದೇಶ್ವರ ವನ್ಯಜೀವಿ ಅಭಯಾರಣ್ಯಕ್ಕೆ ಸದ್ಯದಲ್ಲಿಯೇ ಹುಲಿ ಸಂರಕ್ಷಿತಾರಣ್ಯದ ಮಾನ್ಯತೆ ದೊರೆಯಲಿದೆ.  ಇದು ರಾಜ್ಯದ ಆರನೇಯ ಹಾಗೂ  ರಾಷ್ಟ್ರದ 51ನೇ ವನ್ಯಜೀವಿ ಅಭಯಾರಣ್ಯವಾಗಿದೆ. 

ಹುಲಿ ಸಂರಕ್ಷಿತಾರಣ್ಯ ಮಾನ್ಯತೆ ನೀಡುವ ಸಂಬಂಧ ಕೇಂದ್ರ ಸರ್ಕಾರ ಕೆಲವೊಂದು ಸ್ಪಷ್ಟೀಕರಣವನ್ನು ಕೇಳಿತ್ತು. ಮಲೆ ಮಹಾದೇಶ್ವರ ವನ್ಯಜೀವಿ ವಿಭಾಗದಿಂದ  ವರದಿಯೊಂದನ್ನು ಕಳುಹಿಸಲಾಗಿದೆ. 

ಸುಮಾರು 907 ಚದರ ಕಿಲೋಮೀಟರ್ ವಿಸ್ತೀರ್ಣವುಳ್ಳ 15 ಹುಲಿಗಳನ್ನು ಹೊಂದಿರುವ ಈ ಪ್ರದೇಶವನ್ನು 2018ರ ಅಖಿಲ ಭಾರತ ಹುಲಿ ಸರ್ವೇಕ್ಷಣಾನುಸಾರ ಹುಲಿ ಸಂರಕ್ಷಿತಾರಣ್ಯವಾಗಿ ಮಾಡುವ ಪ್ರಸ್ತಾವನ್ನು  ಈ ಹಿಂದೆ ವನ್ಯಜೀವಿ ಮಂಡಳಿ ಅಧ್ಯಕ್ಷರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಂತಿಮಗೊಳಿಸಿದ್ದರು. ಆದರೆ, ಹುಲಿ ಸಂರಕ್ಷಿತಾರಣ್ಯವನ್ನಾಗಿ ಘೋಷಿಸಲು ತಾಂತ್ರಿಕ ಅನುಮೋದನೆ ಮಾತ್ರ ಬಾಕಿ ಉಳಿದಿದೆ ಎಂದು  ಮಲೆ ಮಹಾದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ವಿ. ಯೆಡುಕೊಂಡಲು ಹೇಳಿದ್ದಾರೆ.

ಎಂಎಂಹಿಲ್ಸ್ ವನ್ಯಜೀವಿ ಅಭಯಾರಣ್ಯ ಪಶ್ಚಿಮ ಭಾಗದಲ್ಲಿ ಬಿಆರ್ ಟಿ ಹುಲಿ ಸಂರಕ್ಷಿತಾರಣ್ಯ ಹಾಗೂ ದಕ್ಷಿಣದಲ್ಲಿ ತಮಿಳುನಾಡಿನ ಸತ್ಯಮಂಗಲ ಹುಲಿಸಂರಕ್ಷಿತಾರಣ್ಯವನ್ನು ಸೇರುತ್ತದೆ. ಇದರಿಂದಾಗಿ  ನವ ಹುಲಿಗಳು ಇಲ್ಲಿಗೆ ಬರುವಂತಾಗುತ್ತವೆ. ಅಲ್ಲದೇ, ಬಿಆರ್ ಟಿ ಹಾಗೂ ಸತ್ಯಮಂಗಲದಲ್ಲೂ ಹುಲಿ ಸಂತತಿ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಂಡೀಪುರಕ್ಕಿಂತಲೂ ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಮಲೆ ಮಹಾದೇಶ್ವರ ವನ್ಯಜೀವಿ ಅಭಯಾರಣ್ಯ, ಜೀವ ವೈವಿದ್ಯತೆಯ ತಾಣವಾಗಿದೆ. ಹುಲಿ, ಚಿರತೆ, ಕರಡಿ, ಆನೆ, ಆಳಿಲು ಮತ್ತಿತರ ಪ್ರಾಣಿಗಳ ಅಮೂಲ್ಯ ವನಸಂಪತ್ತು ಆಗಿದೆ. 

SCROLL FOR NEXT