ರಾಜ್ಯ

ಕರ್ನಾಟಕ ಹೂಡಿಕೆದಾರರ ಆದ್ಯತೆಯ ತಾಣ: ಬಿ.ಎಸ್. ಯಡಿಯೂರಪ್ಪ

Srinivasamurthy VN

ಬೆಂಗಳೂರು: ಕರ್ನಾಟಕ ತನ್ನ ಸಮಗ್ರ ಹಾಗೂ ತಂತ್ರಗಾರಿಕೆಯ ಪ್ರಗತಿ ಯೋಜನೆಗಳ ಮೂಲಕ ಜಾಗತಿಕ ಮಟ್ಟದ ವಿವಿಧ ವಲಯಗಳಿಂದ ಬೃಹತ್ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಟೈಮ್ಸ್ ಸಮೂಹ ಸಂಸ್ಥೆ ಆಯೋಜಿಸಿದ್ದ ‘ಭಾರತೀಯ ಆರ್ಥಿಕ ಸಮಾವೇಶ, ದಕ್ಷಿಣ ವಿಭಾಗ’ದಲ್ಲಿ ಶುಕ್ರವಾರ ಮಾತನಾಡಿದ ಅವರು, ದೇಶದ ಒಟ್ಟಾರೆ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಶೇ. 9ರಷ್ಟು ಪಾಲು ಹೊಂದಿದೆ ಎಂದರು.

ಭಾರತೀಯ ಉದ್ಯಮದ ಪ್ರಗತಿಯಲ್ಲಿ ರಾಜ್ಯದ ಕೊಡುಗೆ ಅಪಾರ ಎಂದು ಅವರು, ಕರ್ನಾಟಕ ಸೇವಾ ವಲಯ ಹಾಗೂ ವ್ಯಾಪಾರ ವಲಯದಲ್ಲಿ 4ನೇ ರಫ್ತು ಪ್ರಮಾಣವನ್ನು ಹೊಂದಿದೆ. ರಾಜ್ಯದ ಪಾರದರ್ಶಕ ನೀತಿಗಳು ಹೊಸ ಉದ್ಯಮ ಹಾಗೂ ಉದ್ಯಮಿಗಳಿಗೆ ಅನುಕೂಲಕರವಾಗಿದೆ ಎಂದರು.

ರಾಜ್ಯದಲ್ಲಿ ಇಂದು ವಿವಿಧ ವಲಯಗಳಿಗೆ ಸೇರಿದ 20 ನೀತಿಗಳಿವೆ ಹಾಗೂ ದೇಶದಲ್ಲೇ ಪ್ರಥಮ ಬಾರಿಗೆ ವಿದ್ಯುತ್ ಚಾಲಿತ ವಾಹನ ಹಾಗೂ ವಿದ್ಯುತ್ ಚಾಲಿತ ಸಂಗ್ರಹ ಯೋಜನೆಯ ನೀತಿಗಳನ್ನು ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯವನ್ನು ದೇಶದ ವಿದ್ಯುತ್ ಚಾಲಿತ ರಾಜಧಾನಿಯನ್ನಾಗಿಸುವ ಗುರಿ ಇದೆ ಎಂದರು.

ಇದಕ್ಕೂ ಮುನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಇಲಾಖೆ ಸಚಿವ ಪಿಯೂಷ್ ಗೋಯಲ್, ದಕ್ಷಿಣ ರಾಜ್ಯಗಳು ದೇಶದ ಪ್ರಗತಿಯ ಇಂಜಿನ್ ಗಳಂತೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆರ್ ಬಿ ಐ ನ 1.76 ಲಕ್ಷ ಕೋಟಿ ರೂ. ಬಳಕೆ ಮಾಡುವ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು. ಇದು ಆರ್ ಬಿ ಐ ಅಲ್ಲಿ ಅನುಪಯುಕ್ತ ಮೊತ್ತವಾಗಿ ಉಳಿದಿದ್ದು, ಅದನ್ನು ದೇಶದ ನಾಗರಿಕರ ಲಾಭಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದರು.

ಈ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಟೀಕೆಗಳನ್ನು ಅವರು ತಳ್ಳಿ ಹಾಕಿದರು.

SCROLL FOR NEXT