ರಾಜ್ಯ

ನಿಷೇಧಾಜ್ಞೆ ನಡುವೆಯೂ ನಗರದಲ್ಲಿ ಹೆಚ್ಚಿದ ಪೌರತ್ವದ ರೋಷಾಗ್ನಿ

Manjula VN

ಬೆಂಗಳೂರು: ನಿಷೇಧಾಜ್ಞೆ ಜಾರಿ ನಡುವೆಯೂ ರಾಜಧಾನಿ ಬೆಗಳೂರಿನಲ್ಲೂ ಪೌರತ್ವ ಕಾಯ್ದೆ ವಿರುದ್ಧದ ಹೋರಾಟದ ಕಿಚ್ಚು ದೊಡ್ಡ ಪ್ರಮಾಣದಲ್ಲಿ ಹೊತ್ತಿಕೊಂಡಿದೆ. 

ಗುರುವಾರ  ಟೌನ್ ಹಾಲ್ ಹಾಗೂ ಮೈಸೂರು ಬ್ಯಾಂಕ್ ವೃತ್ತ ಎರಡೂ ಕಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ 11ರಿಂದ 4 ಗಂಟೆ ವರೆಗೂ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಜೈನ್ ಸೇರಿದಂತೆ ಎಲ್ಲಾ ಧರ್ಮೀಯರು ಒಕ್ಕೊರಲಿನಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದರು. 

ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಅವಕಾಶವಿಲ್ಲ ಎಂಬ ಪ್ರತಿಭಟನಾಕಾರರನ್ನು ಮನವೊಲಿಸಲು ವಿಫಲ ಯತ್ನ ನಡೆಸಿದ ಪೊಲೀಸರು, ಪ್ರಿತಭಟನಾ ನಿರತ ಪ್ರಮುಖ ಮುಖಂಡರನ್ನು ವಶಕ್ಕೆ ಪಡೆದು ಪ್ರತಿಭಟನಾಕಾರರನ್ನು ಚದುರಿಸುವ ಪ್ರಯತ್ನ ನಡೆಸಿದರು. 

ಟೌನ್ ಹಾಲ್ ಬಳಿ ಇತಿಹಾಸಕಾರ ರಾಮಚಂದ್ರ ಗುಹಾ, ಸಿಐಟಿಯು ಮಹಿಳಾ ಸಂಘಟನೆಯ ವಿಮಲಾ ಮತ್ತಿತರ ಮುಖಂಡರನ್ನು ಬಂಧಿಸಿದ ಪೊಲೀಸರು, ಪುರಭವನ ಬಳಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಶಿವಾಜಿನಗರ ಶಾಸಕ ಲಿಜ್ವಾನ್ ಅರ್ಶದ್ ಮತ್ತಿತರ ನಾಯಕರನ್ನು ವಶಕ್ಕೆ ಪಡೆದರು. ಇದರಿಂದ ಎರಡೂ ಕಡೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. 

ಪೊಲೀಸರು ಪ್ರಮುಖ ಮುಖಂಡರು, ನಾಯಕರನ್ನು ವಶಕ್ಕೆ ಪಡೆದು ಕರೆದೊಯ್ದರೂ ಪ್ರತಿಭಟನಾಕಾರರ ಕಿಚ್ಚು ಕಡಿಮೆಯಾಗಲಿಲ್ಲ. ಒಂದೆಡೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರನ್ನು ಚದುರಿಸುವಲ್ಲಿ ಪೊಲೀಸರು ಯಶಸ್ವಿಯಾದರಾದರೂ, ಅವರಲ್ಲಿ ಬಹುತೇಕರು ವಿವಿಧ ರಸ್ತೆಗಳ ಮೂಲಕ ಸಾಗಿ ಪುರಭವನ ಬಳಿ ಪ್ರತಿಭಟನೆಗೆ ಸೇರಿಕೊಂಡರು. ಇದರಿಂದ ಆ ಸ್ಥಳದಲ್ಲಿ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗಿ ಹೋರಾಟ ತೀವ್ರಗೊಂಡಿತು. ಇದರಿಂದ ಜೆಸಿ ರಸ್ತೆ, ಕೆಆರ್ ಮಾರುಕಟ್ಟೆ, ಕಾರ್ಪೋರೇಷನ್ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಪೊಲೀಸರು ಪ್ರತಿಭಟನಾಕಾರರು ಮತ್ತು ಪ್ರತಿಭಟನೆಯಿಂದ ಉಂಟಾದ ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. 

ನಾವೂ ಕೂಡ ಭಾರತೀಯರು. ನಮ್ಮ ಪೂರ್ವಜರ ಹೆಸರುಗಳನ್ನು ಹುತಾತ್ಮರ ಸ್ಮಾರಕಗಳ ಮೇಲೆ ಬರೆಯಲಾಗಿದೆ. ಆದರೂ ನಮ್ಮನ್ನೇಕೆ ತಾರತಮ್ಯದಿಂದ ನೋಡಲಾಗುತ್ತಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರ ಅಬ್ದುಲ್ಲಾ ಬಾಷಾ ಪ್ರಶ್ನಿಸಿದ್ದಾರೆ. 

SCROLL FOR NEXT