ರಾಜ್ಯ

ಜಾತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಒಕ್ಕಲಿಗ ಎಂಬ ಕಾರಣಕ್ಕೆ ಮಂತ್ರಿ ಮಾಡ್ತಾರೆ-ಡಿಕೆ ಶಿವಕುಮಾರ್

Nagaraja AB

ರಾಮನಗರ: ನಾನು ಏನೇ  ವಿಶ್ವಮಾನವ ತತ್ವವನ್ನು ಹೇಳಿದರೂ, ನನ್ನ ಲೆಕ್ಕಾಚಾರ, ನನ್ನ ಮಂತ್ರಿ ಮಾಡುವುದು ನಾನು  ಒಕ್ಕಲಿಗ ಎಂಬ ಕಾರಣದಿಂದಲೇ. ಅದರಿಂದ ನಾನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಸೂಚ್ಯವಾಗಿ ಹೇಳಿದ್ದಾರೆ. 

ರಾಮನಗರದಲ್ಲಿಂದು ಒಕ್ಕಲಿಗರ ಭವನ ಉದ್ಧಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಹೆಸರು, ಧರ್ಮಗಳನ್ನು  ಬದಲಾವಣೆ ಮಾಡಿಕೊಳ್ಳಬಹುದು ಆದರೆ ಜಾತಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಒಕ್ಕಲಿಗ ಸಮುದಾಯ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ಸಮುದಾಯವಾಗಿದೆ ಎಂದರು. 

ರಾಜ್ಯದ  ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಂದ ಹಿಡಿದು, ಮಾಜಿ ಪ್ರಧಾನಿ ದೇವೇಗೌಡರು,  ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ ಕೃಷ್ಣ, ಕುಮಾರಸ್ವಾಮಿ ಸೇರಿದಂತೆ ಎಲ್ಲ ಒಕ್ಕಲಿಗ  ನಾಯಕರು ಜಾತ್ಯತೀತ ತತ್ವದ ಮೇಲೆ ರಾಜ್ಯದಲ್ಲಿ ಆಡಳಿತ ನಡೆಸಿದ್ದಾರೆ. ಈ ಸಮುದಾಯ  ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದು, ಎಲ್ಲರನ್ನು ಸಹೋದರ ಮನೋಭಾವದಿಂದ ಕಾಣುತ್ತಿದೆ ಎಂದರು. 

ಒಕ್ಕಲಿಗರು,  ಭೂಮಿ ತಾಯಿ ಮಕ್ಕಳು ಎಂದು ಕರೆಸಿಕೊಳ್ಳುವ ಭಾಗ್ಯ ಎಲ್ಲರಿಗೂ ಸಾಧ್ಯವಿಲ್ಲ. ಇದು ನಮ್ಮ  ಭಾಗ್ಯ. ಹೀಗಾಗಿ ಜಾತ್ಯತೀತ ತತ್ವದಲ್ಲಿ ಬದುಕುತ್ತಿರುವ ನಾವು ಈ ಅವಕಾಶವನ್ನು ಸರಿಯಾಗಿ  ಬಳಸಿಕೊಂಡು ಸಮಾಜಕ್ಕೆ ಉತ್ತಮ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.

ನನ್ನ ಮೇಲೆ ಸುಳ್ಳಿನ ಆರೋಪ ಮಾಡಿದಾಗ, ನನ್ನ ಮೇಲೆ ರಾಜಕೀಯವಾಗಿ  ಷಡ್ಯಂತ್ರ ಮಾಡಿದಾಗ ಪಕ್ಷಭೇದ ಮರೆದು, ನನ್ನ ಜತೆ ನಿಂತ ಎಲ್ಲ ಈ ಸಮಾಜದ, ಜಿಲ್ಲೆಯ  ನಾಗರೀಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಯಾವುದೇ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಲ್ಲ, ಯಾರಿಗೋ ಮೋಸ  ಮಾಡಿಲ್ಲ. ನನ್ನ ಬದುಕು ಚೆನ್ನಾಗಿತ್ತು. ನಾನು ತಪ್ಪು ಮಾಡಿದ್ದರೆ ಆ ದೇವರು ಶಿಕ್ಷೆ  ನೀಡಲಿ ಆ ಶಿಕ್ಷೆ ಅನುಭವಿಸಲು ಈ ಡಿ.ಕೆ. ಶಿವಕುಮಾರ್ ಸಿದ್ಧನಿದ್ದೇನೆ ಎಂದು ಹೇಳಿದರು.

ಈ ಜಿಲ್ಲೆಯ  ಜನರು ಬೆಂಗಳೂರಿಗೆ ಹೊರಹೋಗುವುದನ್ನು ತಪ್ಪಿಸಲು ರೇಷ್ಮೆ, ಹೈನುಗಾರಿಕೆ ಹಾಗೂ ಕೃಷಿ  ವಿಚಾರಕ್ಕೆ ಒತ್ತು ನೀಡಿದ್ದೇವೆ. ಹೀಗಾಗಿ ನಾನು ಮತ್ತು ಕುಮಾರಸ್ವಾಮಿ ಅವರು  ಅಧಿಕಾರದಲ್ಲಿದ್ದಾಗ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ. ನನಗೆ  ಅವಕಾಶ ಸಿಕ್ಕ ಸಂದರ್ಭದಲ್ಲಿ ಜಿಲ್ಲೆಯ ಪ್ರತಿಯೊಬ್ಬ ರೈತನಿಗೆ ಟ್ರಾನ್ಸ್ ಫಾರಂ  ಕೊಡಿಸುವಂತಹ ಕೆಲಸ ಮಾಡಿದ್ದೇನೆ. ಹೀಗೆ ನಮ್ಮ ಜನರ ಬದುಕು ಸುಧಾರಿಸಲು ನಮ್ಮ ಪ್ರಯತ್ನ  ಮಾಡಿದ್ದೇವೆ ಎಂದು ವಿವರಿಸಿದರು.

SCROLL FOR NEXT