ರಾಜ್ಯ

ಮೋದಿ ಬಳಿಕ ಯೂ ಟರ್ನ್ ಹೊಡೆದ ಬೊಮ್ಮಾಯಿ: ರಾಜ್ಯದಲ್ಲಿ ನಿರಾಶ್ರಿತ ಕೇಂದ್ರವಿಲ್ಲ ಎಂದ ಗೃಹ ಸಚಿವ

Manjula VN

ಬೆಂಗಳೂರು: ದೇಶದಾದ್ಯಂತ ಎನ್ಆರ್'ಸಿ ಜಾರಿಗೆ ತರುವ ಕುರಿತಂತೆ ಘೋಷಣೆ ಮಾಡಿ ನಂತರ ಪ್ರಧಾನಿ ಮೋದಿಯವರು ಯೂಟರ್ನ್ ಹೊಡೆದಿದ್ದರು. ಇದೀಗ ಅದೇ ರೀತಿ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಮಾಡಿದ್ದು, ರಾಜ್ಯದಲ್ಲಿ ಅಕ್ರಮ ವಲಸಿಗರನ್ನಿಡಲು ಯಾವುದೇ ನಿರಾಶ್ರಿತ ಕೇಂದ್ರಗಳೂ ನಿರ್ಮಾಣಗೊಂಡಿಲ್ಲ ಎಂದು ಹೇಳಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಹೈಕೋರ್ಟ್'ಗೆ ಅಫಿಡವಿಟ್ ಸಲ್ಲಿಸಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು, ವಲಸಿಗರನ್ನು ಸೊಂಡೆಕೊಪ್ಪದ ಬಳಿಯಿರುವ ಶಾಶ್ವತ ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಹೇಳಿದ್ದರು. 

ಇದಲ್ಲದೆ, ಬೊಮ್ಮಾಯಿಯವರೇ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದರು. ಅಕ್ರಮ ವಲಸಿಗರನ್ನಿಡಲು ಈಗಾಗಲೇ ನಿರಾಶ್ರಿತ ಕೇಂದ್ರಗಳು ತಯಾರಾಗಿವೆ ಎಂದು ಹೇಳಿದ್ದರು. ಆದರೆ, ಇದೀಗ ಹೇಳಿಕೆಯನ್ನು ಬದಲಿಸಿದ್ದು, ರಾಜ್ಯದಲ್ಲಿ ಯಾವುದೇ ನಿರಾಶ್ರಿತ ಕೇಂದ್ರಗಳೂ ನಿರ್ಮಾಣಗೊಂಡಿಲ್ಲ. ಅದರ ಉದ್ದೇಶವೂ ಇಲ್ಲ. ಸೌಲಭ್ಯ ಒದಗಿಸುತ್ತಿರುವ ಕುರಿತು ನನಗೆ ಮಾಹಿತಿಲ್ಲ ಎಂದು ಹೇಳಿದ್ದಾರೆ. 

ನಿರಾಶ್ರಿತ ಕೇಂದ್ರ ನಿರ್ಮಾಣ ಕುರಿತು ನನಗೆ ಮಾಹಿತಿಯಿಲ್ಲ. ಮಾಹಿತಿ ಬೇಕಿದ್ದರೆ ಸಮಾಜ ಕಲ್ಯಾಣ ಇಲಾಖೆಯಲ್ಲಿಯೇ ಪಡೆಯಿರಿ. ನಿರಾಶ್ರಿತ ಕೇಂದ್ರ ಕಾರ್ಯನಿರ್ವಹಿಸುತ್ತಿವೆ ಎಂದಿದ್ದೇ ಆಗಿದ್ದರೆ, ಅಲ್ಲಿ ಜನರಿರಬೇಕಿತ್ತು ಎಂದು ಬೊಮ್ಮಾಯಿಯವರು ತಿಳಿಸಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಈಗಾಗೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಿರ್ಮಾಣಗೊಂಡಿರುವ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಜನವರಿ 1ಕ್ಕೆ ಈ ಕೇಂದ್ರಗಳು ಆರಂಭಗೊಳ್ಳಲಿವೆ ಎಂದು ಮಾಹಿತಿ ನೀಡಲಾಗಿದೆ. ಹೀಗಾಗಿ ಕೇಂದ್ರಗಳಲ್ಲಿ ಅಗತ್ಯ ಕಾರ್ಯಗಳನ್ನು ಪೂರ್ಣಗೊಲಿಸಲಾಗುತ್ತಿದೆ. ಅಡುಗು ಕೋಣೆಗಳೂ ತಯಾರಾಗಿವೆ. ಈಗಾಗಲೇ ವಾರ್ಡನ್ ಗಳನ್ನೂ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ಪ್ರಿತಿಕ್ರಿಯೆ ನೀಡಿ, ಕೇಂದ್ರಗಳಲ್ಲಿ ಬಂಧಿಸಲ್ಪಡುವ ಜನರನ್ನು ಸುರಕ್ಷಿತವಾಗಿ ಕಾಪಾಡಲಾಗುತ್ತದೆ. ಅವರು ಯಾವುದೇ ರಾಷ್ಟ್ರದ ಪ್ರಜೆಗಳಾದರೂ ಆವರ ರಕ್ಷಣೆ ನಮ್ಮ ಮೇಲಿರುತ್ತದೆ. ವಲಸಿಗರಿಗೆ ಆಹಾರ, ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತದೆ. ಗೃಹ ಸಚಿವರ ಹೇಳಿಕೆ ಕುರಿತು ನನಗೆ ಮಾಹಿತಿಯಿಲ್ಲ ಎಂದಿದ್ದಾರೆ. 

30 ಮಂದಿಯನ್ನು ಕೇಂದ್ರಗಳಲ್ಲಿ ಶೀಘ್ರದಲ್ಲಿಯೇ ಬಂಧನಕ್ಕೊಳಪಡಿಸಲಾಗುತ್ತಿದೆ. 10-15 ಜನವರಿಯೊಳಗಾಗಿ ಅವರು ನಿರಾಶ್ರಿತ ಕೇಂದ್ರಗಳಲ್ಲಿರಲಿದ್ದಾರೆ. ನಿರಾಶ್ರಿತರಿಗಾಗಿ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದ್ದು, ಇದೀಗ ಈ ಕೇಂದ್ರಗಳು ಕೇವಲ ಆಫ್ರಿಕಾದ ಮಾದಕ ವ್ಯಸನಿಗಳ ಅಪರಾಧಿಗಳಿಗೆ ಮಾತ್ರ ಎಂದು ಸರ್ಕಾರ ಹೇಳುವಂತಿಲ್ಲ. ಒಂದು ವೇಳೆ ಹೇಳಿದ್ದೇ ಆದರೆ, ಈ ಬಗ್ಗೆ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಬೇಕಾಗುತ್ತದೆ ಂದು ಸಮಾಜ ಕಲ್ಯಾಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 

SCROLL FOR NEXT